ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯು ತೀವ್ರ ವಾದ-ವಿವಾದಗಳಿಗೆ ಕಾರಣವಾಗಿದ್ದು, ಈ ಬೆಳವಣಿಗೆಯು ಈಗ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುವ ಹಂತಕ್ಕೆ ತಲುಪಿದೆ.
2023ರ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪಾರದರ್ಶಕವಾಗಿ ನಡೆದಿತ್ತು ಎಂದು ಪ್ರತಿಪಾದಿಸಿರುವ ಬಿಜೆಪಿ ಮುಖಂಡರಾದ ರಾಮಸ್ವಾಮಿ ಶೆಟ್ಟಿಗದ್ದೆ ಮತ್ತು ಸತೀಶ್ ಅದ್ದಡ ಅವರು ಇಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಮಸ್ವಾಮಿ ಅವರು ಚುನಾವಣಾ ಏಜೆಂಟ್ ಆಗಿ ಹಾಗೂ ಸತೀಶ್ ಅವರು ಅಂಚೆ ಮತಗಳ ಟೇಬಲ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದರು.
ಆಗಿನ ಮತ ಎಣಿಕೆ ವೇಳೆ ಕಾಂಗ್ರೆಸ್ಸಿಗರಿಂದ ಹಣ ಪಡೆದು ಮೋಸ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಈ ಇಬ್ಬರೂ ನಾಯಕರು ನಿನ್ನೆ ಕೊಪ್ಪದ ವೀರಭದ್ರಸ್ವಾಮಿ ದೇಗುಲದಲ್ಲಿ ಪ್ರಮಾಣ ಮಾಡಿದ್ದರು. ಇಂದು ಧರ್ಮಸ್ಥಳಕ್ಕೆ ತೆರಳಿ ಅಂತಹ ಯಾವುದೇ ಅಕ್ರಮ ನಡೆದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
2023ರ ಚುನಾವಣೆಯಲ್ಲಿ ಟಿ.ಡಿ. ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಇತ್ತೀಚೆಗೆ ನಡೆದ 2023ರ ಅಂಚೆ ಮತಗಳ ಮರು ಎಣಿಕೆಯಲ್ಲಿ ಡಿ.ಎನ್. ಜೀವರಾಜ್ ಅವರು 52 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಘೋಷಿಸಲಾಗಿದೆ.
ಈ ಫಲಿತಾಂಶದ ಬದಲಾವಣೆಯನ್ನು ವಿರೋಧಿಸಿ ಈಗಾಗಲೇ ರಾಜೇಗೌಡ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ಹೋರಾಟದ ಜೊತೆಗೆ ಶೃಂಗೇರಿ ಕ್ಷೇತ್ರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವ ರಾಜೇಗೌಡ ಅವರು, ಮತ ಚೋರಿ ಮಾಡಿದವರಿಗೆ ದೈವಿಕ ಶಿಕ್ಷೆಯಾಗಲಿ ಎಂದು ಆಶಿಸಿದ್ದಾರೆ.
ಒಟ್ಟಾರೆಯಾಗಿ ಶೃಂಗೇರಿ ರಾಜಕೀಯ ಜಿದ್ದಾಜಿದ್ದಿ ಈಗ ಕಾನೂನು ಮತ್ತು ದೈವಿಕ ಎರಡೂ ಸ್ತರಗಳಲ್ಲಿ ಚರ್ಚೆಯಾಗುತ್ತಿದೆ.
