ಕೊಟ್ಟಿಗೆಹಾರ: ಇತ್ತೀಚೆಗೆ ಅನ್ಯ ಕಾರಣಗಳಿಗಾಗಿ ನಮ್ಮ ಕರ್ನಾಟಕ ಪೊಲೀಸರ ವರ್ಚಸ್ಸಿಗೆ ಪೆಟ್ಟು ಬಿದ್ದಿರುವುದು, ಧಕ್ಕೆಯೊದಗಿರುವುದು ಸುಳ್ಳಲ್ಲ. ಆದರೂ ನಮ್ಮ ಪೊಲೀಸರು ತಮ್ಮಲ್ಲಿ ಆ ದಕ್ಷತೆ, ಮಾನವೀಯ ಗುಣಗಳು ನಶಿಸಿಲ್ಲ ಎಂಬುದನ್ನು ಸಾಬೀತುಪಡಿಸುವ ಘಟನೆಯೊಂದು ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಹೌದು .. ಅನಾಥ ಶವಕ್ಕೆ ಅಂತ್ಯಸಂಸ್ಕಾರ ನೆರವೇರಿಸಿ, ಮಾನವೀಯತೆ ಮೆರೆದ ಬಣಕಲ್ ಪಿಎಸ್ಐ ದಿಲೀಪ್ ಕುಮಾರ್. ದೇವನಗುಲ್ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಅನಾಥ ವೃದ್ಧನ ಶವ ಭಾನುವಾರ ಪತ್ತೆಯಾಗಿತ್ತು. ಈ ವೇಳೆ ಕರ್ತವ್ಯದ ಜೊತೆಗೆ ಕರುಣೆ ತೋರಿದ ಪಿಎಸ್ಐ ದಿಲೀಪ್ ಕುಮಾರ್
ಪ್ರಾಥಮಿಕ ತನಿಖೆಯಲ್ಲಿ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಅಥವಾ ಅನುಮಾನಾಸ್ಪದ ಲಕ್ಷಣಗಳು ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸಹಜ ಸಾವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಶಂಕಿಸಲಾಗಿದೆ. ಬಳಿಕ ಸಮಾಜಸೇವಕ ಆರಿಫ್ ಅವರ ಆಂಬ್ಯುಲೆನ್ಸ್ ಸಹಾಯದಿಂದ ಮೃತದೇಹವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು.
ಅನಾಥ ಶವವನ್ನು ಸಾಗಿಸಲು ಯಾರೂ ಮುಂದೆ ಬರದ ಸಂದರ್ಭದಲ್ಲಿ, ಪಿಎಸ್ಐ ದಿಲೀಪ್ ಕುಮಾರ್ ಸ್ವತಃ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಆಂಬ್ಯುಲೆನ್ಸ್ಗೆ ಸಾಗಿಸಿದರು. ಪೊಲೀಸ್ ಅಧಿಕಾರಿಯ ಈ ನಡೆ ಸ್ಥಳೀಯರ ಮನ ಗೆದ್ದಿದ್ದು, ಜಿಲ್ಲೆಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.
ಪಿಎಸ್ ಐ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದ್ದು ಮಾನವೀಯ ಕಾರ್ಯದಿಂದ ಗಮನ ಸೆಳೆದ ಬಣಕಲ್ ಪೊಲೀಸ್ ಠಾಣೆ ಅನಾಥ ಶವಕ್ಕೂ ಗೌರವಯುತ ಅಂತ್ಯಕ್ರಿಯೆ ಮಾಡಲಾಗಿದೆ.
