ಚಿಕ್ಕಮಗಳೂರು: ಹೊರವಲಯದ ಹುಕ್ಕುಂದ ಗ್ರಾಮದ ಖಾಲಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟು ಜೂಜಾಟವಾಡುತ್ತಿದ್ದ ಹೈಟೆಕ್ ಅಡ್ಡೆಯ ಮೇಲೆ ಗ್ರಾಮಾಂತರ ಠಾಣೆಯ ಪಿಎಸ್ಐ ನೇತ್ರಾವತಿ ವಿ ಮತ್ತು ತಂಡ ಮಿಂಚಿನ ದಾಳಿ ನಡೆಸಿದೆ.
ಖಚಿತ ಮಾಹಿತಿ ಮೇರೆಗೆ ಅಲರ್ಟ್ ಆದ ಪೊಲೀಸರು ಜೂಜಿನ ಅಡ್ಡೆಗೆ ಅನಿರೀಕ್ಷಿತ ಮುತ್ತಿಗೆ ಹಾಕಿದ್ದಾರೆ. ಪೊಲೀಸರ ಎಂಟ್ರಿಯಿಂದ ಕಂಗಾಲಾದ ಜೂಜುಕೋರರು ಓಡಲು ಯತ್ನಿಸಿದರಾದರೂ, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸುತ್ತುವರಿದು ಅಬ್ದುಲ್ ಖಾದರ್, ಸಾದತ್, ನಾಸಿರ್, ವೆಂಕಟೇಶ್ ಮತ್ತು ಅನ್ಸರ್ ಎಂಬ ಐದು ಜನ ಆರೋಪಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಹೆಡೆಮುರಿ ಕಟ್ಟಿದ್ದಾರೆ.
ದಾಳಿಯ ವೇಳೆ ಜೂಜಿನ ಅಡ್ಡೆಯಿಂದ ಭಾರಿ ಪ್ರಮಾಣದ ನಗದು ಜಪ್ತಿ ಮಾಡಲಾಗಿದ್ದು, 500, 200, 100 ರೂಪಾಯಿ ಮುಖಬೆಲೆಯ ನೋಟುಗಳು ಸೇರಿದಂತೆ ಒಟ್ಟು 1,43,310 ರೂಪಾಯಿ ಹಣ ಹಾಗೂ ಜೂಜಿಗೆ ಬಳಸುತ್ತಿದ್ದ 52 ಇಸ್ಪೀಟು ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸದ್ಯ ಬಂಧಿತ ಐದೂ ಜನ ಆರೋಪಿಗಳ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
