ಮೂಡಿಗೆರೆ: ಮಾಧ್ಯಮಗಳು ಸಮಾಜದ ಪರಿವರ್ತನೆ ಮತ್ತು ಜನಜಾಗೃತಿಗೆ ಪೂರಕವಾದ ಸುದ್ದಿಗಳಿಗೆ ಹೆಚ್ಚು ಮಹತ್ವ ನೀಡಬೇಕೆಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಶನಿವಾರ ತಾಲೂಕಿನ ಕೊಟ್ಟಿಗೆಹಾರದ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸುದ್ದಿ ಮಾದ್ಯಮಗಳು ಸಮಾಜದ 4ನೇ ಅಂಗವಾಗಿದ್ದು, ಸಾಮಾಜಿಕ ಸಮಸ್ಯೆಗಳನ್ನು ಬೆಳಕಿಗೆ ತರುವ ಜತೆಗೆ ಆಡಳಿತ ಕಾರ್ಯ ವೈಖರಿಯನ್ನು ಎಚ್ಚರಿಸುವ ಕೆಲಸ ಮಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಮಾಧ್ಯಮಗಳು ಇತರೇ ಮಾಧ್ಯಮಕ್ಕೆ ಸ್ಪರ್ಧೆ ನೀಡುವ ಭರಾಟೆಯಲ್ಲಿ ಅಗತ್ಯವಿಲ್ಲದ ಸುದ್ದಿಗಳು ಹೆಚ್ಚಾಗುತ್ತಿರುವುದರಿಂದ ಮಾದ್ಯಮಗಳ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದು ಆಗಬಾರದೆಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಚಿತ್ರಕಲೆ ಸ್ಪರ್ಧೆ ವೀಕ್ಷಣೆಗೆ ಆಗಮಿಸಿದ್ದ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಶಾಲೆಗಳಲ್ಲಿ ಪಠ್ಯೇತರ ವಿಷಯಗಳಿಗೆ ಹೆಚ್ಚು ಒತ್ತು ಕೊಡದ ಕಾರಣ, ಮಕ್ಕಳಲ್ಲಿರುವ ಪ್ರತಿಭೆಗಳು ಬೆಳಕಿಗೆ ಬಾರದಂತಾಗಿದೆ. ಹಾಗಾಗಿ ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳುವಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಇಲ್ಲಿ ಚಿತ್ರಕಲೆಗೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ರಾಷ್ಟ್ರ ನಾಯಕರ ಭಾವಚಿತ್ರ ಬಿಡಿಸಲು ಕೊಟ್ಟಿರುವ ವಿಷಯ ನಿಜಕ್ಕೂ ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳಲ್ಲಿ ದೇಶದ ಮೇಲೆ ಇನ್ನಷ್ಟು ಭಕ್ತಿ ಮೂಡಿಸಿದಂತಾಗಿದೆ ಎಂದು ಹೇಳಿದರು.
ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಎಂಇಎಸ್ ಶಾಲೆಯ ವಿದ್ಯಾರ್ಥಿ ಅಂಗದ್ ಅವಿನಾಶ್ಭಟ್, ದ್ವಿತೀಯ ಬಣಕಲ್ ವಿದ್ಯಾಭಾರತಿ ಶಾಲೆಯ ಬಿ.ಎಲ್.ಲೋಚನ್, ತೃತೀಯ ಸ್ಥಾನ ಬಣಕಲ್ ವಿದ್ಯಾಭಾರತಿ ಶಾಲೆಯ ಬಿ.ಎಸ್.ಸಾತ್ವಿಕಾ ಪಡೆದರು. ಸಮಾಧಾನಕ ಬಹುಮಾನವನ್ನು ಬೆಥನಿ ಶಾಲೆಯ ಕೆ.ಆರ್.ಐಶ್ವರ್ಯ, ಜಿ.ಜಿ.ಸಿಂಚನ, ನಳಂದ ಶಾಲೆಯ ವಿಶ್ರುತ್ರಾಜ್, ಬಣಕಲ್ ಶಾಲೆಯ ಕೆ.ಎಸ್.ವೇಧ, ವುಡ್ಬ್ರಿಡ್ಜ್ ಶಾಲೆಯ ಬಿ.ವೈ.ಧನ್ವೀರ್, ಬಣಕಲ್ ನಝರತ್ ಶಾಲೆಯ ಮೇಲ್ರಿಕ್ ಡಿಸೋಜಾ, ರಿವರ್ ವ್ಯೂವ್ ಶಾಲೆಯ ಆರ್.ಚೇತಸ್ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ್ ಅತ್ತಿಗೆರೆ ವಹಿಸಿದ್ದರು. ತೀರ್ಪುಗಾರರಾದ ವಸಂತ್, ಕೆ.ಎಸ್.ಪೃತ್ವಿಕ್, ಬಿ.ನಯನಾ, ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಮಂಜಪ್ಪ, ದೀಪಕ್ ದೊಡ್ಡಯ್ಯ, ಭರತ್ ಬಾಳೂರು, ಬಿ.ಎಂ. ಸತೀಶ್, ವಿಕ್ರಂ ಬಣಕಲ್, ಮದುಕುಮಾರ್, ಬಿ.ಆರ್.ಭಾಲಕೃಷ್ಣ, ಬಿ.ಕೆ.ಲಕ್ಷ್ಮಣ್ ಗೌಡ ಮತ್ತಿತರರಿದ್ದರು
