ಕೊಟ್ಟಿಗೆಹಾರ/ಬಣಕಲ್: ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹೋಂಸ್ಟೇ ಹಾಗೂ ರೆಸಾರ್ಟ್ಗಳಿಗೆ ಪೊಲೀಸ್ ಪೇದೆ ರಘು ಕಿರುಕುಳ ನೀಡುತ್ತಿದ್ದಾರೆ ಎಂದು ಮೂಡಿಗೆರೆ ತಾಲೂಕು ರೆಸಾರ್ಟ್ ಹಾಗೂ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಆರೋಪಿಸಿದ್ದಾರೆ.
ಅವರ ಪ್ರಕಾರ, ಪೊಲೀಸ್ ಪೇದೆ ರಘು ಅವರು ಮೇಲಾಧಿಕಾರಿಗಳ ಹೆಸರನ್ನು ಹೇಳಿಕೊಂಡು ವಿವಿಧ ಹೋಂಸ್ಟೇಗಳಿಗೆ ತೆರಳಿ ಉಚಿತವಾಗಿ ಕೊಠಡಿ (ರೂಮ್) ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ರೀತಿಯ ನಡೆ ಹೋಂಸ್ಟೇ ಮಾಲೀಕರಿಗೆ ಮಾನಸಿಕ ಒತ್ತಡ ಉಂಟುಮಾಡಿದ್ದು, ವ್ಯವಹಾರಕ್ಕೂ ಧಕ್ಕೆ ತರುತ್ತಿದೆ ಎಂದು ಆರೋಪಿಸಲಾಗಿದೆ.

ಬಣಕಲ್ ಠಾಣಾ ವ್ಯಾಪ್ತಿಯ 25ಕ್ಕೂ ಹೆಚ್ಚು ಹೋಂಸ್ಟೇ ಹಾಗೂ ರೆಸಾರ್ಟ್ಗಳಿಗೆ ಭೇಟಿ ನೀಡಿ ಇದೇ ರೀತಿಯ ವರ್ತನೆ ನಡೆಸಲಾಗಿದೆ ಎಂದು ಅಸೋಸಿಯೇಷನ್ ಸದಸ್ಯರು ದೂರಿದ್ದಾರೆ.
ಈ ಬೆಳವಣಿಗೆಯನ್ನು ಖಂಡಿಸಿ ಮೂಡಿಗೆರೆ ತಾಲೂಕು ರೆಸಾರ್ಟ್ ಹಾಗೂ ಹೋಂಸ್ಟೇ ಅಸೋಸಿಯೇಷನ್ ತುರ್ತು ಸಭೆ ನಡೆಸಿ, ಘಟನೆ ಕುರಿತು ಚರ್ಚಿಸಿತು. ಪ್ರವಾಸೋದ್ಯಮ ಈಗಾಗಲೇ ಕುಂಠಿತಗೊಂಡಿದ್ದು, ಮಳೆಗಾಲದಲ್ಲಿ ಮಾತ್ರ ಸ್ವಲ್ಪ ಮಟ್ಟಿನ ಪ್ರವಾಸಿಗರ ಆಗಮನದಿಂದ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಹೋಂಸ್ಟೇ ಉದ್ಯಮಕ್ಕೆ ಇಂತಹ ಕಿರುಕುಳ ಮತ್ತಷ್ಟು ಸಮಸ್ಯೆ ಉಂಟುಮಾಡುತ್ತಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ಹೋಂಸ್ಟೇ ರಸಾಟ್ ಅಸೋಸಿಯೇಷನ್ ಪದಾಧಿಕಾರಿಗಳಾದ ರಂಜನ್ ಅಜಿತ್ ಕುಮಾರ್. ಸತೀಶ್ ಬಿ ಎಂ. ರಾಘವೇಂದ್ರ ಕೆಸವಳಲು . ದೀಕ್ಷಿತ್. ಕಲ್ಲೇಶ್. ಮಧುಸೂದನ್. ಸಂಜಯ್ ಕೊಟ್ಟಿಗೆಹಾರ, ಪಟದುರ್ ಕಾರ್ತಿಕ್ ಸೇರಿದಂತೆ ಹೋಂ ಸ್ಟೇ ಮಾಲೀಕರು ಹಾಜರಿದ್ದರು
