ಚಿಕ್ಕಮಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅಶ್ಲೀಲ ನಿಂದನೆ ಹಾಗೂ ಕೀಳು ಮಟ್ಟದ ಪದ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಚಿಕ್ಕಮಗಳೂರಿನ ವಕೀಲೆ ಮತ್ತು ಬಿಜೆಪಿ ಮುಖಂಡೆ ಸಂಗೀತ ಪ್ರಸಾದ್ ಅವರು ಚಂದ್ರು ಓಡೆಯರ್ ವಿರುದ್ಧ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯ ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದನ್ನ ಆಕ್ಷೇಪಿಸಿ ಫೇಸ್ಬುಕ್ ಮೆಸೆಂಜರ್ ಅಲ್ಲಿ ಚಂದ್ರು ಒಡೆಯರ್ ಎಂಬಾತ ಅತ್ಯಂತ ಕೀಳು ಮಟ್ಟದ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾನೆಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಮೂಡಿಗೆರೆ ಬಂದರೆ ಪ್ರಾಣ ತೆಗೆಯುತ್ತೇವೆ ಎಂದು ಬಹಿರಂಗವಾಗಿ ಹಲ್ಲೆ ಮತ್ತು ಪ್ರಾಣ ಬೆದರಿಕೆ ಒಡ್ಡಿದ್ದಾನೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. instagram ನಲ್ಲಿ ಮಲ್ಲಿಕಾರ್ಜುನ ಎಂಬಾತ ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಮಹಿಳೆಯರು ಮುಂಚೂಣಿಗೆ ಬರುವುದನ್ನು ತಡೆಯುವ ದುರುದ್ದೇಶದಿಂದ ಅತ್ಯಂತ ಅಶ್ಲೀಲ ಮತ್ತು ಚಾರಿತ್ರ್ಯವಧೆ ಕಾಮೆಂಟ್ ಹಾಕಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
