ಮೂಡಿಗೆರೆ: ತಾಲೂಕಿನ ಶುಭನಗರ ಗ್ರಾಮದ ಮುಖ್ಯ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದರಿಂದ ಬೇಸತ್ತ ಗ್ರಾಮಸ್ಥರು ಕೊನೆಗೆ ತಾವೇ ಸ್ವಂತ ಖರ್ಚಿನಲ್ಲಿ ರಸ್ತೆ ರಿಪೇರಿ ಮಾಡಿಕೊಳ್ಳುವ ಮೂಲಕ ಪಂಚಾಯಿತಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಸ್ತೆ ಗುಂಡಿಗಳನ್ನು ಮುಚ್ಚುವ ಕನಿಷ್ಠ ಸೌಜನ್ಯವನ್ನೂ ಪಂಚಾಯಿತಿ ತೋರದಿದ್ದಾಗ, ಗ್ರಾಮಸ್ಥರೇ ಹಣ ಹಾಕಿ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಈ ವೇಳೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರೂ, ಯಾವುದೇ ರೀತಿಯ ನೆರವು ಸಿಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
“ವೋಟಿಂಗ್ಗೆ ಮಾತ್ರ ಬರ್ತಾರೆ, ಆಮೇಲೆ ತಲೆನೇ ಹಾಕಲ್ಲ!”
ಚುನಾವಣೆ ಬಂದಾಗ ಮಾತ್ರ ಮನೆ ಮನೆಗೆ ಬಂದು ವೋಟ್ ಕೇಳುವ ಜನಪ್ರತಿನಿಧಿಗಳು, ಗೆದ್ದ ನಂತರ ಊರಿನ ಕಡೆ ಮುಖ ಮಾಡಿಯೂ ನೋಡುವುದಿಲ್ಲ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
”ವೋಟಿಂಗ್ ಸಮಯದಲ್ಲಿ ಮಾತ್ರ ಇವರಿಗೆಲ್ಲ ಊರಿನ ಪ್ರತಿಯೊಂದು ಸಮಸ್ಯೆಯೂ ಕಣ್ಣಿಗೆ ಕಾಣಿಸುತ್ತದೆ. ಆದರೆ ವೋಟ್ ಪಡೆದು ಗೆದ್ದ ಮೇಲೆ ಗ್ರಾಮದ ಕಡೆ ತಲೆ ಹಾಕಿ ಮಲಗುವುದಕ್ಕೂ ಇವರಿಗೆ ಸಮಯವಿರುವುದಿಲ್ಲ. ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ,” ಎಂದು ಊರಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಕತ್ತಲಲ್ಲಿ ಶುಭನಗರ: ಬೀದಿ ದೀಪಗಳೂ ಬಂದ್!
ಕೇವಲ ರಸ್ತೆ ಸಮಸ್ಯೆಯಷ್ಟೇ ಅಲ್ಲದೆ, ಶುಭನಗರ ಗ್ರಾಮದಲ್ಲಿ ಸರಿಯಾಗಿ ಬೀದಿ ದೀಪಗಳು ಉರಿಯದೆ ಅದೆಷ್ಟೋ ದಿನಗಳಾಗಿವೆ. ರಾತ್ರಿಯಾಗುತ್ತಿದ್ದಂತೆ ಇಡೀ ಊರು ಕತ್ತಲಲ್ಲಿ ಮುಳುಗುತ್ತಿದ್ದು, ಸಾರ್ವಜನಿಕರು ಹಾಗೂ ಮಕ್ಕಳು ಓಡಾಡಲು ಭಯಪಡುವಂತಾಗಿದೆ.
ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣವಾಗಿ ಮರೆತಿರುವ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತಕ್ಷಣವೇ ಎಚ್ಚೆತ್ತುಕೊಂಡು, ಶುಭನಗರದ ಮೂಲಸೌಕರ್ಯಗಳಾದ ಬೀದಿ ದೀಪ ಮತ್ತು ರಸ್ತೆ ದುರಸ್ತಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
