ಮೂಡಿಗೆರೆ: ಅರಣ್ಯ ಪ್ರದೇಶಗಳು ಹಾಗೂ ಆನೆಗಳ ಸಂಚಾರ ಮಾರ್ಗಗಳಲ್ಲಿ ವಿದ್ಯುತ್ ತಂತಿಗಳಿಂದ ಉಂಟಾಗಬಹುದಾದ ಅಪಾಯವನ್ನು ಕಡಿಮೆ ಮಾಡಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಮಹತ್ವದ ಸುರಕ್ಷತಾ ಕ್ರಮ ಕೈಗೊಳ್ಳಲು ಮುಂದಾಗಿದೆ.
ಹೌದು ಮೆಸ್ಕಾಂ ವ್ಯಾಪ್ತಿಯ ಅರಣ್ಯ ಮತ್ತು ಆನೆ ಕಾರಿಡಾರ್ ಪ್ರದೇಶಗಳಲ್ಲಿ ಈಗಿರುವ ವಿದ್ಯುತ್ ಮಾರ್ಗಗಳನ್ನು ಕವರ್ಡ್ ಕಂಡಕ್ಟರ್ ವ್ಯವಸ್ಥೆಗೆ ಪರಿವರ್ತಿಸಲಾಗುವುದು ಎಂದು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಈ ಕುರಿತು ಸುದ್ಧಿಗಾರರೊಂದಿಗೆ ಅವರು, ಕಾಡು ಹಾಗೂ ಆನೆ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಸಾಮಾನ್ಯ ತೆರೆದ ವಿದ್ಯುತ್ ತಂತಿಗಳ ಬದಲಿಗೆ ರಕ್ಷಣಾತ್ಮಕ ಹೊದಿಕೆಯುಳ್ಳ ಕವರ್ಡ್ ಕಂಡಕ್ಟರ್ಗಳನ್ನು ಅಳವಡಿಸುವುದರಿಂದ ವನ್ಯಜೀವಿಗಳ ಸುರಕ್ಷತೆ ಹೆಚ್ಚುವುದರ ಜೊತೆಗೆ ವಿದ್ಯುತ್ ವ್ಯತ್ಯಯವೂ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಈ ಯೋಜನೆಯನ್ನು ,ಶಿವಮೊಗ್ಗ, ಸಾಗರ, ಚಿಕ್ಕಮಗಳೂರು–1, ಚಿಕ್ಕಮಗಳೂರು–2, ಕೊಪ್ಪ ಮತ್ತು ಕುಂದಾಪುರ ವಿಭಾಗಗಳಲ್ಲಿ ಕೈಗೆತ್ತಿಕೊಳ್ಳಲು ಮೆಸ್ಕಾಂ ನಿರ್ಧರಿಸಿದೆ. ಇದರಿಂದ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶಗಳು ಮತ್ತು ಆನೆಗಳ ಸಂಚಾರವಿರುವ ಸೂಕ್ಷ್ಮ ಪ್ರದೇಶಗಳ ವಿದ್ಯುತ್ ವ್ಯವಸ್ಥೆ ಮತ್ತಷ್ಟು ಸುರಕ್ಷಿತವಾಗುವ ನಿರೀಕ್ಷೆಯಿದೆ.
ಮಲೆನಾಡಿನ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಓಡಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು–1 ಮತ್ತು ಚಿಕ್ಕಮಗಳೂರು–2 ವಿಭಾಗಗಳನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ. ಈಗಾಗಲೇ ಚಿಕ್ಕಮಗಳೂರು ವಿಭಾಗದಲ್ಲಿ ಕವರ್ಡ್ ಕಂಡಕ್ಟರ್ ಬಳಸಿ ವಿದ್ಯುತ್ ವಿತರಣಾ ಜಾಲ ಬಲಪಡಿಸುವ ಕಾಮಗಾರಿಗೂ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.
ವಿದ್ಯುತ್ ಮೂಲಸೌಕರ್ಯ ಸುರಕ್ಷತೆಗೆ ಸಂಬಂಧಿಸಿದಂತೆ ಇನ್ನೂ ಹಲವು ಕ್ರಮಗಳನ್ನು ಘೋಷಿಸಲಾಗಿದೆ ಕ್ಷೇತ್ರ ಸಿಬ್ಬಂದಿಯ ಸುರಕ್ಷತೆಗಾಗಿ 705 ನಾನ್-ಕಾಂಟ್ಯಾಕ್ಟ್ ವೋಲ್ಟೇಜ್ ಡಿಟೆಕ್ಟರ್ಗಳ ಖರೀದಿ ಹಾಗೂ ಟ್ರಾನ್ಸ್ಫಾರ್ಮರ್ಗಳ ಗುಣಮಟ್ಟ ಪರೀಕ್ಷೆಗೆ ಆರು ಪರೀಕ್ಷಾ ಬೆಂಚ್ಗಳ ವ್ಯವಸ್ಥೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ
