ಹಾಸನ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ನಂಬಿಸಿ ಮಗು ಕರುಣಿಸಿ ಕೈಕೊಟ್ಟ ಘಟನೆ ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ನಡೆದಿದೆ.
ಹೌದು .. ಬೀರಕನಹಳ್ಳಿ ಗ್ರಾಮದ ರಾಜು ಮತ್ತು ನಿಲುವಾಗಿಲು ಗ್ರಾಮದ ಅನ್ನಪೂರ್ಣ ನಡುವೆ ಪ್ರೀತಿ ಇತ್ತು. ಒಂದು ವರ್ಷದಿಂದ ಇಬ್ಬರೂ ಒಟ್ಟಿಗಿದ್ದರು. ಮದುವೆಯಾಗುವುದಾಗಿ ರಾಜು ಅನ್ನಪೂರ್ಣಗೆ ಭರವಸೆ ನೀಡಿದ್ದ. ಈ ನಡುವೆ ಅನ್ನಪೂರ್ಣ ಗರ್ಭಿಣಿಯಾಗಿ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಜನಿಸಿದ ಬಳಿಕ ರಾಜು ಪ್ರಿಯತಮೆ ಹಾಗೂ ಮಗುವನ್ನು ಬಿಟ್ಟು ತಲೆಮರೆಸಿಕೊಂಡಿದ್ದ.
ಯುವಕನ ಈ ಕೃತ್ಯದಿಂದ ನ್ಯಾಯ ವಂಚಿತಳಾಗಿದ್ದ ಯುವತಿಯ ಪರವಾಗಿ ಪೊಲೀಸರು ಮತ್ತು ಡಿಎಸ್ಎಸ್ ಮುಖಂಡರು ಮಧ್ಯಪ್ರವೇಶಿಸಿದ್ದಾರೆ. ಹೇಗೋ ಪತ್ತೆ ಹಚ್ಚಿ ರಾಜುವನ್ನು ವಾಪಸ್ ಕರೆತಂದು, ಆತನಿಗೆ ಮನವೊಲಿಸಿ ಬುದ್ಧಿವಾದ ಹೇಳಿದ್ದಾರೆ.
ಅಂತಿಮವಾಗಿ, ಸ್ಥಳೀಯ ಅಂಬೇಡ್ಕರ್ ಪುತ್ತಳಿ ಎದುರು ರಾಜು ಮತ್ತು ಅನ್ನಪೂರ್ಣಗೆ ಮದುವೆ ಮಾಡಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ
