ಬೆಂಗಳೂರು: ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನ ಮಂತ್ರಿ, ವಿಪಕ್ಷಗಳು ಟೀಕಿಸಿದ್ದರು. ಈಗ ಕರ್ನಾಟಕದ ಗ್ಯಾರಂಟಿ ಮಾಡೆಲ್ ದೇಶದ ಎಲ್ಲೆಲ್ಲೂ ಇದೆ. ವಿಶ್ವದ ಅನೇಕ ದೇಶಗಳು ಒಪ್ಪಿಕೊಂಡಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ತಮ್ಮ ನೇತೃತ್ವದ ಸರ್ಕಾರದ 100 ದಿನಗಳ ಆಡಳಿತ ಶತದಿನೋತ್ಸವ ಸಂಭ್ರಮದಲ್ಲಿ ಮಾತನಾಡಿದ ಅವರು, ಇದು ನೂರು ದಿನಗಳ ಆಚರಣೆ ಅಲ್ಲ. ಇದು ಡಿ.ಕೆ.ಶಿವಕುಮಾರ್ ಸರ್ಕಾರ ಅಲ್ಲ. ಇದು ನಿಮ್ಮ ಸರ್ಕಾರ. 7 ಕೋಟಿ ಜನತೆಯ ಸರ್ಕಾರ ಇದು. ನಾನೊಬ್ಬನೇ ರಥ ಎಳೆಯುತ್ತಿಲ್ಲ. ಈ ಸರ್ಕಾರ ಅನೇಕ ಆಲೋಚನೆ ಮಾಡ್ತಿದೆ. ಶತಕತದ ಪಥದಲ್ಲಿ ಕರ್ನಾಟಕ ಹೆಜ್ಜೆ ಹಾಕ್ತಿದೆ. ನಾಡಿನ ಜನರ ಶ್ರಮ, ಯವಕರ ಕನಸು ಕರ್ನಾಟಕದ ಪ್ರಗತಿ.
ಎಲ್ಲಾ ಸಚಿವರು, 224 ಶಾಸಕರು, 75 MLC, 12 ರಾಜ್ಯಸಭೆ, 28 ಲೋಕಸಭೆ ಸದಸ್ಯರು ಒಟ್ಟಾಗಿ ದುಡಿಯೋ ಕೆಲಸ ಮಾಡ್ತಿದೆ. ಯಾರು ಸಹಕಾರ ಕೊಡ್ತಾರೆ ಮುಖ್ಯ ಅಲ್ಲ. ನಾವೆಲ್ಲರೂ ಒಟ್ಟಾಗಿ ನಾಡಿನ, ದೇಶದ ಹಿತಕ್ಕಾಗಿ ಸಂವಿಧಾನಬದ್ಧವಾಗಿ ಕೆಲಸ ಮಾಡ್ತೀವಿ. ರಾಗ, ದ್ವೇಷ ಇಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂದರು.
ಜನರ ಜೀವನಕ್ಕೆ ಗ್ಯಾರಂಟಿಗೆ 1,45,416 ಕೋಟಿ ಹಣ ಕೊಡಲಾಗಿದೆ. ಜಗತ್ತಿನ ಅತಿ ದೊಡ್ಡ ಯೋಜನೆ. ಗ್ಯಾರಂಟಿ ಮಾಡಲು ಆಗೊಲ್ಲ ಅಂದ್ರು. ನಾವು ಸಾಧನೆ ಮಾಡಿದ್ದೇವೆ. ಜನರಿಗೆ ಗ್ಯಾರಂಟಿ ಕೊಟ್ಟಿದ್ದೇವೆ. ಗೃಹಲಕ್ಷ್ಮಿಯಿಂದ 1.24 ಕೋಟಿ ಮಹಿಳೆಯರಿಗೆ ಹಣ ಸಿಕ್ಕಿದೆ. ಪ್ರತಿ ಮಹಿಳೆಗೆ 66 ಸಾವಿರ ಹಣ ಸಿಕ್ಕಿದೆ. ಗೃಹಜ್ಯೋತಿ ಸೌಲಭ್ಯವನ್ನು 1.67 ಕೋಟಿ ಜನರಿಗೆ ಕೊಡಲಾಗಿದೆ. 30,522 ಕೋಟಿ ಖರ್ಚು ಮಾಡಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದು ಗ್ಯಾರಂಟಿ ಯೋಜನೆಗಳನ್ನು ಬಣ್ಣಿಸಿದರು.
