ಹಾಸನ : ಮಲೆನಾಡು ಭಾಗದಲ್ಲಿ ಕಾಡಾನೆ-ಮನುಷ್ಯ ಸಂಘರ್ಷಕ್ಕೆ ಕೊನೆ ಎಂದು ಎಂಬ ಪ್ರಶ್ನೆ ಹಲವು ವರ್ಷಗಳಿಂದ ಜನರನ್ನ ಕಾಡುತ್ತಲೇ ಇದೆ. ಈ ಮಧ್ಯೆ ಕಾಡಾನೆ ತುಳಿದು ವೃದ್ಧರೊಬ್ಬರು ಮೃತಪಟ್ಟ ಘಟನೆ ಆಲೂರು ತಾಲೂಕಿನ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ.
76 ವರ್ಷದ ಪುಟ್ಟಯ್ಯ ಮೃತ ವೃದ್ಧ. ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ಹೋಗುತ್ತಿದ್ದ ಸಂದರ್ಭ ಪುಟ್ಟಯ್ಯ ಮೇಲೆ ಕಾಡಾನೆ ದಾಳಿ ಮಾಡಿದೆ. ತುಳಿದು ಪ್ರಾಣ ತೆಗೆದಿದ್ದು, ಬಳಿಕ ಶವದ ಮೇಲೆ ಕಾಫಿಗಿಡದ ರೆಂಬೆಗಳನ್ನು ಮುರಿದು ಮುಚ್ಚಿ ಅಲ್ಲಿಂದ ತೆರಳಿದೆ.
ಸಂಜೆಯಾದ್ರೂ ಪುಟ್ಟಯ್ಯ ಮನೆಗೆ ಬಾರದ ಕಾರಣ ಕುಟುಂಬಸ್ಥರು ಹುಡುಕಾಡಿದ್ದಾರೆ. ಇಂದು ಬೆಳಗ್ಗೆ ಕಾಫಿ ತೋಟದೊಳಗೆ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು, ಸ್ಥಳೀಯ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ಹಾವಳಿ ನಿಯಂತ್ರಣ ಮಾಡಬೇಕೆಂದು ಜನರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
