ಚಿಕ್ಕಮಗಳೂರು: ಮೂಡಿಗೆರೆಯ ಮಲೆನಾಡಿನ ಹಳ್ಳಿ ಹಳ್ಳಿಯ ಭಾಗಗಳಲ್ಲಿ ಆನೆಗಳ ಉಪಟಳಗಳು ಹೆಚ್ಚಾಗಿದ್ದು ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಗಟ್ಟುವಂತೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಆಗ್ರಹಿಸಿದ್ದಾರೆ
ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಗೆ ಪ್ರತಿಕ್ರಿಯಿಸಿ ಅವರು, ಕಾಡಾನೆ ಹಾವಳಿಯಿಂದ ತಾಲೂಕಿನ ಜನತೆ ಹೈರಾಣಾಗಿದ್ದು ಬಡವರಿಗೆ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹೊಟ್ಟೆಯ ಮೇಲೆ ಬರೆ ಎಳೆದಂತೆ ಆಗಿದೆ.

ಹೊಯ್ಸಳಲು, ಮಣ್ಣಿಕೆರೆ, ಅಣಜೂರು, ನಿಡಗೋಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಓಡಾಟ ಕಂಡು ಬಂದಿದ್ದು ಇಲ್ಲಿನ ಜನರು ಭಯದಿಂದ ಬದುಕುತ್ತಿದ್ದಾರೆ. ಕೂಲಿ ಕೆಲಸ ಮಾಡಲು ದಿನೇ ದಿನೇ ರಜೆ ಮಾಡಬೇಕಾದ ದುಃಸ್ಥಿತಿ ನಿರ್ಮಾಣವಾಗಿದ್ದು ಅವರಿಗೆ ಕೆಲಸ ಇಲ್ಲದೇ ಜೀವನ ತಳ್ಳುವುದು ಕಷ್ಟವಾಗಿದೆ.
ಕೂಲಿಮಾಡುವ ಜನರಿಗೆ ಹಾಗೂ ಬಡ ರೈತರಿಗೆ ಅರಣ್ಯಇಲಾಖೆ ಕೂಡಲೇ ಪರಿಹಾರ ನೀಡಬೇಕು ಈಗಾಗಲೇ ಸ್ಥಳೀಯ ರೈತರಾದ ಹೊಯ್ಸಳಲು ಗ್ರಾಮದ ಚಂದ್ರಯ್ಯ, ಶಿವಪ್ಪ,ರುದ್ರಯ್ಯ, ಮುದ್ದಯ್ಯ, ಭೈರಮ್ಮ, ಸುಧಾಕರ ಗೌಡರ ತೋಟ ಹಾಗೂ ವಾಟೇಹಳ್ಳಿಯ ಗದ್ದೆ,ತೋಟಗಳು ತುಂಬಾ ಹಾನಿಗೊಳಿಸಿದೆ.ಆನೆಗಳಿಂದ ಪ್ರಾಣಹಾನಿಯಾಗುವ ಸಂಭವವಿದ್ದು ಕೂಡಲೇ ಅಂತಹ ಆನೆಗಳನ್ನು ಬೇರೆ ಸೂಕ್ತವಾದ ಅರಣ್ಯಕ್ಕೆ ಸ್ಥಳಾಂತರಿಸಬೇಕು.ಅವುಗಳಿಗೆ ಆಹಾರ ನೀಡಿ ನಾಡಿಗೆ ಬರದಂತೆ ನೋಡಿಕೊಳ್ಳಬೇಕು.
ಬಡವರ ಆಸ್ತಿ ಮುಟ್ಟುಗೋಲು ಹಾಕಲು ಜನರನ್ನು ಓಕ್ಕಲೆಬ್ಬಿಸಲು ಈ ರೀತಿ ಆನೆಗಳನ್ನು ನಾಡಿಗೆ ಬಿಡುತ್ತಿರಬಹುದು ಎಂದು ಜನರಲ್ಲಿ ಅನುಮಾನಗಳು ಹೆಚ್ಚಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಪರಿಸ್ಥಿತಿಗಳನ್ನು ಅರಣ್ಯ ಇಲಾಖೆ ಗಂಬೀರವಾಗಿ ಪರಿಗಣಿಸಬೇಕು ಇಲ್ಲವಾದಲ್ಲಿ ಕೃಷಿ ಭೂಮಿ, ಪ್ರಾಣ ಹಾನಿಗಳಿಗೆ ಅರಣ್ಯಇಲಾಖೆ ಕಾರಣವಾಗುತ್ತದೆ ಎಂದರು. ಹಾಗೆ ರೈತರ ಜೀವನದಲ್ಲಿ ಚೆಲ್ಲಾಟ ಆಡದೆ ಕೂಡಲೇ ಎಚ್ಛೆತುಕೊಂಡು ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲವಾದಲ್ಲಿ ಮೂಡಿಗೆರೆ ತಾಲ್ಲೂಕಿನ ಸಂಘ ಸಂಸ್ಥೆಗಳೆಲ್ಲ ಒಟ್ಟಾಗಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು
