ಚಿಕ್ಕಮಗಳೂರು: ಶಿಥಿಲಾವಸ್ಥೆಯಲ್ಲಿದ್ದ ನೀರಿನ ಟ್ಯಾಂಕ್ ತೆರವುಗೊಳಿಸುವ ವೇಳೆ ಕಾರ್ಮಿಕರ ಎಡವಟ್ಟಿನಿಂದ ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದ್ದು, ಟ್ಯಾಂಕ್ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಅನೇಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಕಾರು ಹಾಗೂ ವ್ಯಕ್ತಿಯೊಬ್ಬರು ಸ್ವಲ್ಪದರಲ್ಲಿ ಪಾರಾಗಿದ್ದು, ಸ್ಥಳದಲ್ಲಿ ನೆರೆದಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಜಿಲ್ಲೆಯ ಅಜ್ಜಂಪುರ ಪಟ್ಟಣದ ಬುಕ್ಕಾಂಬೂದಿ ರಸ್ತೆಯಲ್ಲಿನ ಶಿಥಿಲವ್ಯಸ್ಥೆಯಲ್ಲಿದ್ದ 80ವರ್ಷಗಳ ಹಿಂದಿನ ನೀರಿನ ಟ್ಯಾಂಕ್ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಜಿಲ್ಲಾಧಿಕಾರಿಗಳು ಟ್ಯಾಂಕ್ ತೆರವುಗೊಳಿಸುವಂತೆ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಶುಕ್ರವಾರ ಟ್ಯಾಂಕ್ ತೆರವುಗೊಳಿಸಲು ಪಟ್ಟಣ ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದು, ತೆರವು ಕಾರ್ಯದಲ್ಲಿ ಭಾಗಿಯಾಗಿದ್ದ ಕಾರ್ಮಿಕರು ಯಾವುದೇ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದೆ. ಟ್ಯಾಂಕ್ ತೆರವು ಕಾರ್ಯಾ ಚರಣೆಗೆ ಮುಂದಾಗಿದ್ದರಿಂದ ಬೃಹತ್ ಟ್ಯಾಂಕ್ ಏಕಾಏಕಿ ಬಿದ್ದಿದೆ.
ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಸಮೀಪದಲ್ಲಿಯೆ ನೀರಿನ ಟ್ಯಾಂಕ್ ಬಿದ್ದಿದ್ದು, ಕಾರಿನಲ್ಲಿದ್ದವರು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಬದಿಯಲ್ಲಿದ್ದ ವ್ಯಕ್ತಿಯೊಬ್ಬರು ಟ್ಯಾಂಕ್ ಬೀಳುತ್ತಿದ್ದಂತೆ ಓಡಿ ಅನಾಹುತ ದಿಂದ ತಪ್ಪಿಸಿಕೊಂಡಿದ್ದಾರೆ. ಟ್ಯಾಂಕ್ ಬಿದ್ದ ರಭಸಕ್ಕೆ ಕಾರಿನ ಗಾಂಜಿಗೆ ಹಾನಿಯಾಗಿದೆ. ಜತೆಗೆ ವಿದ್ಯುತ್ ಕಂಬ ಗಳಿಗೆ ಹಾನಿಯಾಗಿದೆ. ಮುಂಜಾಗೃತ ಕ್ರಮಗಳನ್ನು ಅನುಸರಿಸದೆ ಟ್ಯಾಂಕ್ ತೆರವಿಗೆ ಮುಂದಾದ ಪಟ್ಟಣ ಪಂಚಾ ಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಇಲ್ಲಿನ ಜನರು ಆಕ್ರೋಶ ಹೊರ ಹಾಕಿದ್ದಾರೆ.
