ಶೃಂಗೇರಿ: ಮಲೆನಾಡಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಧಾರಾಕಾರ ಮಳೆಗೆ ತುಂಗೆ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಬೈಪಾಸ್ ಪಾರ್ಕಿಂಗ್ ಪ್ರದೇಶ ನೀರಿನಲ್ಲಿ ಮುಳುಗಡೆ ಹೊಂದಿದೆ ಹಾಗೆ ಕೆರೆ ಕಟ್ಟೆ ಪ್ರದೇಶದಿಂದ ನದಿಗೆ ಭಾರಿ ಪ್ರಮಾಣದ ನೀರು ಸೇರುತ್ತಿದೆ.

ನದಿಯೂ ರಸ್ತೆ ಮಟ್ಟಕ್ಕೆ ಹರಿಯುತ್ತಿದ್ದರಿಂದ ಇದೇ ರೀತಿ ಮುಂದುವರೆದರೆ ಗಾಂಧಿ ಮೈದಾನ ಮತ್ತು ಪ್ಯಾರಲಲ್ ರಸ್ತೆಗಳು ಜಲಾವೃತಗೊಂಡಿವೆ.. ನದಿಪಾತ್ರದ ಹೊಲ-ಗದ್ದೆ ತೋಟಗಳಿಗೆ ನೀರು ನುಗ್ಗಿದ್ದು ಬೆಳೆಗಳಿಗೂ ಅಪಾರ ನಷ್ಟವಾಗಿದೆ. ನಿರಂತರ ಮಳೆಯಿಂದಾಗಿ ಅಡಿಕೆ ಹಾಗೂ ಕಾಫಿ ಬೆಳೆಗಳಿಗೆ ಈಗಾಗಲೇ ಕೊಳೆ ರೋಗ ಆವರಿಸಿಕೊಂಡಿದ್ದು ಈ ಮಳೆಯಿಂದಾಗಿ ಕೊಳೆ ರೋಗ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಆನೆಗುಂದ ಸಮೀಪ ಗುಡ್ಡ ಕುಸಿದು ಒಂದು ಬದಿಯ ರಸ್ತೆ ಸಂಪೂರ್ಣ ಮುಚ್ಚಿಹೋಗಿದೆ. ಸದ್ಯ ರಸ್ತೆಯಲ್ಲಿ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿದ್ದು, ನಿರಂತರವಾಗಿ ಸುರಿಯುತ್ತಿರುವ ಮಹಾಮಳೆ ಮತ್ತೆ ಕುಸಿಯುವ ಆತಂಕ ಎದುರಾಗಿದೆ.
