ಚಿಕ್ಕಮಗಳೂರು : ಕರ್ನಾಟಕದ ಕೊನೆಯ ನಕ್ಸಲ್ ಅಂತ ಗುರುತಿಸಿಕೊಂಡಿದ್ದ ಕೋಟೆಹೊಂಡ ರವೀಂದ್ರ ಇಂದು ಸರ್ಕಾರಕ್ಕೆ ಶರಣಾಗಿದ್ದಾರೆ. ಕಳೆದ ತಿಂಗಳು ಎಂಟರಂದು ೬ ಮಂದಿ ನಕ್ಸಲರು ಸಿಎಂ ಸಿದ್ದರಾಮಯ್ಯ ಎದುರು ಶರಣಾಗಿದ್ದರು. ಆದರೆ ಒಬ್ಬ ಮಾತ್ರ ಶೃಂಗೇರಿ ಅರಣ್ಯದಲ್ಲಿ ಉಳಿದಿರುವ ಮಾಹಿತಿ ಇತ್ತು.
ರವೀಂದ್ರರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ನಡೆಸಿದ ಪ್ರಯತ್ನ ಸಫಲವಾಗಿದೆ. ಇಂದು ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ. ಶರಣಾಗತಿಯ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ರವೀಂದ್ರ, ನಾನು ನನ್ನ ಸ್ವಂತ ಇಚ್ಛೆಯಿಂದ ಶರಣಾಗಿದ್ದೇನೆ. ಶರಣಾಗತಿಯಾಗಲು ಯಾರ ಒತ್ತಡವು ಇರಲಿಲ್ಲ. ನಾನು ಸರ್ಕಾರ ಹಾಗೂ ಜಿಲ್ಲಾಡಳಿತದ ಮುಂದೆ ಬೇಡಿಕೆಗಳನ್ನು ಇಟ್ಟಿದ್ದೇನೆ. ನಮ್ಮ ಊರಿಗೆ ಸರಿಯಾದ ರಸ್ತೆಗಳಿಲ್ಲ. ಗ್ರಾಮಸ್ಥರಿಗೆ ಹಕ್ಕು ಪತ್ರಗಳನ್ನು ನೀಡಿಲ್ಲ. ಅಲ್ಲಿರುವ ಸ್ಥಳೀಯರಿಗೆ ಕಾಡಿನಲ್ಲಿರುವ ಉತ್ಪನ್ನಗಳನ್ನು ಬಳಸಿಕೊಳ್ಳಲು ಅವಕಾಶ ಕೊಡಬೇಕು ಮನವಿ ಮಾಡಿದ್ದಾರೆ.
