ಚಿಕ್ಕಮಗಳೂರು : ಐದು ವರ್ಷದ ಹಿಂದೆ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣವನ್ನು ಚಿಕ್ಕಮಗಳೂರು ಪೊಲೀಸರು ಭೇದಿಸಿದ್ದಾರೆ. ಚಳ್ಳೆಹಣ್ಣು ತಿನ್ನಿಸುತ್ತಾ ತಿರುಗಾಡುತ್ತಿದ್ದ ಇಬ್ಬರು ಖತರ್ನಾಕ್ಗಳಿಗೆ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಮಹಮದ್ ಕಬೀರ್, ಯೂಸುಫ್ ಪಾಷಾ ಬಂಧಿತ ಆರೋಪಿಗಳು. ನಗರದ ಬಸವನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಚೋರರನ್ನು ಬಂಧಿಸಲಾಗಿದೆ. ಐದು ವರ್ಷದ ಹಿಂದೆ ನಗರದ ಕೇಸರಿ ಜ್ಯುವೆಲ್ಲರಿಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು, 25 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದರು. 2020ರ ಜುಲೈ ತಿಂಗಳಿನಲ್ಲಿ ಈ ಘಟನೆ ನಡೆದಿತ್ತು. ಇಬ್ಬರು ಚೋರರು ಬೇರೆ ಬೇರೆ ಜಿಲ್ಲೆಗಳಲ್ಲೂ ವಿವಿಧ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದರು. ಇವರಿಗಾಗಿ ಐದು ಜಿಲ್ಲೆಯ ಪೊಲೀಸರು ಹುಡುಕಾಟ ನಡೆಸಿದ್ದರು. ಚಿಕ್ಕಮಗಳೂರು ಪೊಲೀಸರ ಕಾರ್ಯಾಚರಣೆಯಿಂದ ಐದು ಜಿಲ್ಲೆಯ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ಬಂಧಿತ ಆರೋಪಿ ಕಬೀರ್ ಬೆಂಗಳೂರಿನ ಆರ್ಟಿ ನಗರದಲ್ಲಿ ವಾಸವಿದ್ದು, ಮೂಲತಃ ಚಿಕ್ಕಮಗಳೂರಿನ ನಿವಾಸಿ. ಯೂಸುಫ್ ಪಾಷಾ ಬೆಂಗಳೂರಿನ ಡಿಜೆ ಹಳ್ಳಿ ನಿವಾಸಿ ಎಂದು ತಿಳಿದುಬಂದಿದೆ.
ಪೊಲೀಸ್ ಇನ್ಸ್ ಪೆಕ್ಟರ್ ಗವಿರಾಜ್ ನೇತೃತ್ವದ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಗವಿರಾಜ್ ನೇತೃತ್ವದ ತಂಡದ ಕಾರ್ಯವನ್ನು SP ವಿಕ್ರಂ ಅಮಟೆ ಶ್ಲಾಘಿಸಿದ್ದಾರೆ.

