ಸಕಲೇಶಪುರ : ವರ್ಷದ ಹಿಂದೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಮೃತಪಟ್ಟಿದ್ದ. ಅದರ ನೆನಪಿಗೆ ಸಕಲೇಶಪುರದಲ್ಲಿ ಅರ್ಜುನನ ಸಮಾಧಿ & ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಅದರ ಉದ್ಘಾಟನೆಗೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ವಿರೋಧ ವ್ಯಕ್ತಪಡಿಸಿದ್ದಾರೆ.
ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಸಮಾಧಿ ಹಾಗೂ ಪ್ರತಿಮೆ ನಿರ್ಮಾಣ ಕಾರ್ಯ ಆಗುತ್ತಿದ್ದು, ಜನವರಿ ೨೩ರಂದು ಲೋಕಾರ್ಪಣೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಅಪೂರ್ಣ ಸಮಾಧಿಯನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ ಅಂತ ಆರೋಪಿಸಿರುವ ಮಂಜು, ಸಂಪೂರ್ಣಗೊಳ್ಳದೆ ಉದ್ಘಾಟನೆಯಾದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಸಮಾಧಿ ಸ್ಥಳ ಪರಿಶೀಲನೆ ಮಾಡಿದ ಮಂಜು ಬಳಿಕ ಪ್ರತಿಕ್ರಿಯಿಸಿದರು. ಸಮಾಧಿ ನೋಡಲು ಬರುವವರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಗೇಟ್, ಸೆಕ್ಯೂರಿಟಿ ಗಾರ್ಡ್, ಸಿಸಿಟಿವಿ, ತುರ್ತು ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯಾಗಿಲ್ಲ. ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಪ್ರಚಾರದ ದೃಷ್ಟಿಯಿಂದ ಉದ್ಘಾಟನೆಗೆ ಮುಂದಾಗಿದ್ದಾರೆ. ಎಲ್ಲಾ ಕಾಮಗಾರಿಯನ್ನು ಮಾಡಿ ಉದ್ಘಾಟನೆ ಮಾಡುವಂತೆ ಆಗ್ರಹಿಸಿದ್ದಾರೆ. ಶಾಸಕರ ಬೇಡಿಕೆಗೆ ಅರಣ್ಯ ಇಲಾಖೆ ಯಾವ ರೀತಿ ಸ್ಪಂದಿಸುತ್ತೆ ಅನ್ನೋದು ಸದ್ಯಕ್ಕಿರುವ ಕುತೂಹಲ.
