ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಪ್ರಕರಣ ಇನ್ನೇನು ತಾರ್ಕಿಕ ಅಂತ್ಯಕ್ಕೆ ಬರುತ್ತಿದೆ. ತೀವ್ರ ವಿಚಾರಣೆ ಬಳಿಕ ಮುಸುಕುಧಾರಿಯನ್ನು ಬಂಧಿಸಿರುವ ವಿಶೇಷ ತನಿಖಾ ತಂಡ ಆತನ ಹೆಸರು, ಊರು, ಹಿನ್ನೆಲೆಯನ್ನು ಬಹಿರಂಗಪಡಿಸಿದೆ.
ಹೌದು. ನೂರಾರು ಶವಗಳನ್ನು ತಾನೇ ಹೂತಿರುವುದಾಗಿ ಮತ್ತು ಹೂಳುವಾಗ ಶವಗಳು ಕೊಲೆ ಮತ್ತು ಅತ್ಯಾಚಾರ ಮಾಡಿದ್ದ ಸ್ಥಿತಿಯಲ್ಲಿರುತ್ತಿದ್ದವು ಎಂಬುದಾಗಿ ಬುರುಡೆ ಬಿಟ್ಟಿದ್ದ ಮಾಸ್ಕ್ ಮ್ಯಾನ್ ಮುಖವಾಡವನ್ನು ಎಸ್ಐಟಿ ಅಧಿಕಾರಿಗಳು ಕಳಚಿದ್ದಾರೆ. ಈತನ ಹಿನ್ನೆಲೆಯನ್ನೂ ಬಹಿರಂಗಪಡಿಸಿದ್ದಾರೆ
ದೂರುದಾರ ಮೂಲತಃ ಮಂಡ್ಯ ಜಿಲ್ಲೆಯವನಾಗಿದ್ದು, ಸಿ.ಎನ್ ಚಿನ್ನಯ್ಯ ಅಲಿಯಾಸ್ ಚಿನ್ನಪ್ಪ ಅಲಿಯಾಸ್ ಚಿನ್ನಯ್ಯ ಅಲಿಯಾಸ್ ಚೆನ್ನಯ್ಯ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಮುಸುಕುಧಾರಿಗೆ ಈ ಹೆಸರು ಬರೋದಕ್ಕೂ ಒಂದು ಕಾರಣ ಇದೆ. ಈತ ನದಿಯಲ್ಲಿ ಮುಳುಗಿದ ಹೆಣಗಳಿಂದ ಚಿನ್ನ ಕದಿಯುತ್ತಿದ್ದನಂತೆ, ಮಹಿಳೆಯರ ಮೂಗುತಿ, ಕಿವಿಯೋಲೆ, ಸರಗಳನ್ನೂ ಕದಿಯುತ್ತಿದ್ದನಂತೆ. ಈ ಕಾರಣದಿಂದಾಗಿಗೇ ಚಿನ್ನಪ್ಪ, ಚಿನ್ನಯ್ಯ ಎಂದು ಕರೆಯುತ್ತಿದ್ದರಂತೆ.
ಸದ್ಯ ಮಾಸ್ಕ್ ಮ್ಯಾನನ್ನ ಬಂಧಿಸಿರುವ ಎಸ್ಐಟಿ ಪೊಲೀಸರು ಮೆಡಿಕಲ್ ಟೆಸ್ಟ್ಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಕರೆತಂದಿದ್ದಾರೆ. ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಆತನನ್ನ ನ್ಯಾಯಾಧೀಶರ ಎದುರು ಹಾಜರುಪಡಿಸಿ, ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.
