ಮೈಸೂರು : ಪ್ರಯಾಗ್ರಾಜ್ ಮಹಾ ಕುಂಭಮೇಳ ಮುಗಿಸಿ ವಾಪಸ್ ಬರುವಾಗ ಅಪಘಾತದಲ್ಲಿ ಮೈಸೂರಿನ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ರಾಮಕೃಷ್ಣ ಶರ್ಮ, ಅರುಣ್ ಶಾಸ್ತ್ರಿ ಮೃತಪಟ್ಟವರು.
ಪ್ರಯಾಗರಾಜ್ ತೀರ್ಥಯಾತ್ರೆ ಮುಗಿಸಿ ಕಾಶಿಗೆ ಕಾರಿನಲ್ಲಿ ಬರುವಾಗ ಮಿರ್ಜಾಪುರದ ಬಳಿ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ತಲೆಗೆ ತೀವ್ರವಾದ ಪೆಟ್ಟಾಗಿದ್ದ ಇಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಮಕೃಷ್ಣ ಶರ್ಮ(31) ಕೆಆರ್ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದರು ಎಂದು ತಿಳಿದುಬಂದಿದೆ. ಅರುಣ್ ಶಾಸ್ತ್ರಿ(38) ಪುರೋಹಿತರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಕೂಡಾ ಅವಿವಾಹಿತರಾಗಿದ್ದರು.
ಘಟನೆ ಬಗ್ಗೆ ಮಾಹಿತಿ ತಿಳಿದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಮೃತದೇಹವನ್ನು ಇಂದು ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಯಲಿದೆ.
