ಚಿಕ್ಕಮಗಳೂರು: ಕಾಫಿನಾಡು ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು ಒಂದೇ ವಾರದ ಅಂತರದಲ್ಲಿ ಇಬ್ಬರು ಬಲಿಯಾಗಿದ್ದು ಅರಣ್ಯ ಇಲಾಖೆಯ ವೈಫಲ್ಯದ ವಿರುದ್ಧ ಮಲೆನಾಡಿಗರ ಆಕ್ರೋಶ ಕಟ್ಟೆ ಒಡೆದಿದೆ.
ಹೌದು .. ಕಳೆದ ಒಂದು ವರ್ಷದಲ್ಲಿ ಕಾಡುಪ್ರಾಣಿಗೆ ಬಲಿಯಾಗಿರುವ ಸಂಖ್ಯೆ 13ಕ್ಕೆ ಏರಿದ್ದು ಇಷ್ಟಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಶ್ವತ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮತ್ತು ಸಂಸದ ಕೋಟಾ ಶ್ರೀನಿವಾಸ ಪುಜಾರಿಯವರು ಸಂಕಷ್ಟದಲ್ಲಿರುವ ಜನರಿಗೆ ಸಂತೈಸಲು ಸಹ ಮುಂದಾಗುತ್ತಿಲ್ಲವೆಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಆನೆ ಶಿಬಿರ ಸ್ಥಾಪನೆ ಮತ್ತು ರೈಲ್ವೇ ಬ್ಯಾರಿಕೇಡ್ ಯೋಜನೆ ಕೇವಲ ಮಾತಾಗಿದೆ ಹೊರತು ಇನ್ನೂ ಜಾರಿಯಾಗಿಲ್ಲ ಇನ್ಮುಂದೆ ಮಲೆನಾಡಿಗರು ಕಾಡಾನೆ ದಾಳಿಗೆ ಸುಮ್ಮನೆ ಕೂತರೆ ದಿನಕ್ಕೊಂದು ಸಾವು ನೋಡುತ್ತಿರಬೇಕು ಹೀಗಾಗಿ ಶಾಶ್ವತ ಪರಿಹಾರ ಒದಗಿಸಲೇ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಕೇವಲ 20 ಲಕ್ಷ ರೂಪಾಯಿ ಪರಿಹಾರದಿಂದ ಜೀವ ಮರಳಿ ಬರುವುದಿಲ್ಲ. ನಮಗೆ ಪರಿಹಾರ ಬೇಡ, ಆನೆ ಹಾವಳಿಗೆ ಶಾಶ್ವತ ಮುಕ್ತಿ ಬೇಕು ಎಂದು ಸ್ಥಳೀಯರು ಕಿಡಿಕಾರಿದರು.
