ಹಾಸನ: ಹಣದ ವಿಚಾರಕ್ಕೆ ವೈಮನಸ್ಸು ಉಂಟಾಗಿ ಸ್ನೇಹಿತನೊಬ್ಬನನ್ನು ಕೊಲೆಗೈದು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 5 ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ, ಕೊಲೆಯಾದ ವರುಣ್ ಕೆ.ಎಂ. ಎಂಬ ಯುವಕನನ್ನು ಅಪಹರಿಸಿ ಎರಡು ದಿನಗಳ ಕಾಲ ನಿರ್ದಯವಾಗಿ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಾದ ಸತೀಶ್, ಉಮರ್, ವಿಜಯ ನಾಯಕ್, ದಾಸರಕೊಪ್ಪಲು ಚೇತನ್ ಹಾಗೂ ಮನು ಅವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು.

ಪ್ರಕರಣದ ಪ್ರಮುಖ ಆರೋಪಿ ಶಶಾಂಕ್ ಮೃತ ವರುಣ್ಗೆ 7 ಸಾವಿರ ಹಣ ನೀಡಿದ್ದನು. ಆ ಹಣವನ್ನು ವಾಪಸ್ ನೀಡದ ಹಿನ್ನೆಲೆ ಉಂಟಾದ ವೈಮನಸ್ಸೇ ಕೊಲೆಗೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮಾರ್ಚ್ 10ರಂದು ಬೈಕ್ ರಿಪೇರಿ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದ ವರುಣ್ ಬಳಿಕ ಮನೆಗೆ ಮರಳಿರಲಿಲ್ಲ. ಅದೇ ದಿನ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ವರುಣ್ ಮತ್ತು ಆತನ ಸ್ನೇಹಿತ ಲೋಹಿತ್ ಅವರನ್ನು ದುಷ್ಕರ್ಮಿಗಳು ಕರೆದುಕೊಂಡು ಹೋಗಿ, ಹಾಸನ ತಾಲೂಕಿನ ಹಂಗರಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಬಂಧಿಸಿ ಹಲ್ಲೆ ನಡೆಸಿದ್ದರು.
ಮಾರ್ಚ್ 11ರಂದು ಮಧ್ಯಾಹ್ನ ನೀರು ತರಲು ಕಳುಹಿಸಿದ ವೇಳೆ ಲೋಹಿತ್ ಆರೋಪಿಗಳಿಂದ ತಪ್ಪಿಸಿಕೊಂಡು ಪಾರಾಗಿದ್ದು, ಗ್ರಾಮಕ್ಕೆ ಬಂದು ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ. ಇದೇ ವೇಳೆ ನಿರಂತರ ಹಲ್ಲೆಯಿಂದ ವರುಣ್ ಮೃತಪಟ್ಟಿದ್ದಾನೆ ಎಂದು ಎಸ್ಪಿ ವಿವರಿಸಿದರು.
