ಕೊಡಗು: ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ತಲೆ ಕತ್ತರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ವಿದ್ಯಾರ್ಥಿನಿಯ ರುಂಡ ಪತ್ತೆಯಾಗಿದೆ. ಕೊಲೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಮರದ ಮೇಲೆ ಬಾಲಕಿಯ ರುಂಡ ಪತ್ತೆಯಾಗಿದೆ.
ಕೊಲೆ ಆರೋಪಿ ವಿದ್ಯಾರ್ಥಿನಿಯ ರುಂಡವನ್ನು ಮರದ ಮೇಲೆ ಇಟ್ಟಿರೋದಾಗಿ ಹೇಳಿದ್ದ. ಅಂತೆಯೇ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿ ಬಾಲಕಿಯ ರುಂಡವನ್ನು ಹುಡುಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ?
ಕಾಫಿನಾಡು ಕೊಡಗಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಿನ್ನೆ ನಡೆದಿತ್ತು. 34 ವರ್ಷದ ಪಾಗಲ್ ಪ್ರೇಮಿ ಓಂಕಾರಪ್ಪ 16 ವರ್ಷದ ಮೀನಾಳನ್ನ ಕೊಲೆಗೈದಿದ್ದ. ಈಕೆ ಕೊಡಗಿನ ಸುರ್ಲಬ್ಬಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಳು.
ಮೀನಾ ಅಪ್ರಾಪ್ತೆಯಾದರೂ ಈಕೆ ಮನೆಯವರು ಮದುವೆ ನಿಶ್ಚಿತಾರ್ಥವನ್ನ ಗುರುವಾರ (ಮೇ 9)ಫಿಕ್ಸ್ ಮಾಡಿದ್ದರು. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು , ಪೊಲೀಸರು ಮಧ್ಯಾಹ್ನ ನಿಶ್ಚಿತಾರ್ಥ ಆಗುವಾಗ ಸ್ಥಳಕ್ಕೆ ಬಂದು ತಡೆದಿದ್ದರು. ಇತ್ತ ನಿಶ್ಚಿತಾರ್ಥ ನಿಂತು ಹೋಯಿತ್ತಲ್ಲ ಅಂತ ಓಂಕಾರಪ್ಪ ಕೋಪಗೊಂಡಿದ್ದ. ಇದೇ ವಿಚಾರಕ್ಕೆ ಸಂಜೆ ಮೀನಾ ಮನೆಗೆ ಹೋಗಿ ಮನೆಯವರೊಂದಿಗೆ ಜಗಳವಾಡಿದ್ದನಂತೆ.
ಜಗಳ ಮಾಡಿದ ನಂತರ ಮೀನಾಳನ್ನ ಮನೆಯಿಂದ ಎಳೆದೊಯ್ದು , ನಿರ್ಜನ ಪ್ರದೇಶಕ್ಕೆ ಕರೆದುಕೊಡು ಹೋಗಿ ಮಚ್ಚಿನಿಂದ ತಲೆ ಕತ್ತರಿಸಿ ಕೊಲೆಗೈದಿದ್ದಾನೆ. ನಂತರ ಆಕೆಯ ರುಂಡ ಮುಂಡ ಬೇರೆ ಬೇರೆ ಮಾಡಿ ತಲೆಯನ್ನ ತೆಗೆದುಕೊಂಡು ಆರೋಪಿ ಓಂಕಾರಪ್ಪ ಪರಾರಿಯಾಗಿದ್ದ. ಮೃತ ವಿದ್ಯಾರ್ಥಿನಿಯ ರುಂಡಕ್ಕಾಗಿ ನಿನ್ನೆಯಿಂದಲೂ ಪೊಲೀಸರು ಶೋಧ ನಡೆಸಿದ್ದು, ಇಂದು ಪತ್ತೆಯಾಗಿದೆ.
