ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾರೆ. ತರೀಕೆರೆ ತಾಲೂಕಿನ ವರ್ತೆಗುಂಡಿಯಲ್ಲಿ ಕಾಡಾನೆ ದಾಳಿಯಿಂದ 35 ವರ್ಷದ ಅಕ್ಬರ್ ಎನ್ನುವವರು ಮೃತಪಟ್ಟಿದ್ದಾರೆ. ತೋಟದಲ್ಲಿ ಆನೆ ಓಡಿಸುವಾಗ ಏಕಾಏಕಿ ಓಡಿಸಿಕೊಂಡ ಬಂದ ಕಾಡಾನೆ ಟಿಂಬರ್ ಕಾರ್ಮಿಕ ಅಕ್ಬರ್ ಮೇಲೆ ದಾಳಿ ನಡೆಸಿದೆ. ಕಾರ್ಮಿಕ ಅಕ್ಬರ್ ಎಂಬುವವರ ದೇಹ ಛಿದ್ರ ಛಿದ್ರವಾಗಿದ್ದು, ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿವಿತದ ರಭಸಕ್ಕೆ ಕಳಚಿಬಿತ್ತು ಕಾಡಾನೆ ದಂತ.!
ಕಾಡಾನೆ ಸಿಟ್ಟು ಎಷ್ಟಿತ್ತೆಂದ್ರೆ ಕಾರ್ಮಿಕನ ದೇಹವನ್ನ ಸಂಪೂರ್ಣ ಛಿದ್ರ ಛಿದ್ರ ಮಾಡಿದೆ. ಈ ವೇಳೆ ತಿವಿತದ ರಭಸಕ್ಕೆ ಸಲಗದ ಒಂದು ದಂತ ಮೃತಹೇಹದ ಪಕ್ಕದಲ್ಲೇ ಬಿದ್ದಿದ್ದು, ಘಟನೆಯ ಭೀಕರತೆಯನ್ನ ಸಾರಿ ಸಾರಿ ಹೇಳುತ್ತಿದೆ. ಜನರು ಕೂಗುತ್ತಲೇ ವ್ಯಕ್ತಿಯನ್ನ ಕೊಂದು ಹಾಕಿದ ಸಲಗ ಕಾಡಿನ ಕಡೆ ಮುಖಮಾಡಿದೆ.
ವಿಡಿಯೋ ಮಾಡಲು ಹೋಗಿದ್ದೇ ಜೀವಕ್ಕೆ ಮುಳುವಾಯ್ತಾ.?
ಇನ್ನೂ ಘಟನೆ ಬಗ್ಗೆ ಮೇಲಿನ ಅಧಿಕಾರಿಗಳಿಗೆ ಪತ್ರ ಬರೆದಿರುವ ಸಿಬ್ಬಂದಿಗಳು, ಕಾಡಾನೆ ವಿಡಿಯೋ ಹಾಗೂ ಪೋಟೋ ತೆಗೆಯಲು ಮುಂದಾಗುತ್ತಿದ್ದಾಗ ಕಾಡಾನೆ ಆಕ್ರೋಶಕ್ಕೆ ಒಳಗಾಗಿ ಅಕ್ಬರ್ ರನ್ನ ತುಳಿದು ಸಾಯಿಸಿದೆ ಅಂತಾ ಮಾಹಿತಿ ನೀಡಿದ್ದಾರೆ.
2 ದಿನದ ಹಿಂದೆಯೂ ಕಾಡಾನೆ ದಾಳಿ; ಸ್ಥಳೀಯರ ಪ್ರತಿಭಟನೆ
ಕಳೆದ 2 ದಿನದ ಹಿಂದೆ ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿಯಲ್ಲಿ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ರು. ಇದೀಗ ಆ ಘಟನೆ ಮಾಸುವ ಮುನ್ನವೇ ಮತ್ತೆ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾಗಿರೋದು ಜನರನ್ನ ಆಕ್ರೋಶಕ್ಕೀಡುಮಾಡಿದೆ. ಘಟನೆ ಖಂಡಿಸಿ ಗ್ರಾಮಸ್ಥರು, ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ರು. ಪದೇ ಪದೇ ಕಾಡಾನೆ ದಾಳಿ ನಡೀತಿದ್ರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು
