17ನೇ ವರ್ಷದ ತುಳು ವೈಭವೋ ಕಾರ್ಯಕ್ರಮವನ್ನು ಮಾ.6ರಂದು ಸಂಜೆ 5 ಗಂಟೆಗೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತುಳುಕೂಟದ ಅಧ್ಯಕ್ಷ ಸುಂದರ ಬಿಳಗುಳ ಹೇಳಿದರು.
ಅವರು ಪತ್ರಿಕಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳೆದ 16 ವರ್ಷದಿಂದ ತುಳುಕೂಟದ ಮೂಲಕ ಮಲೆನಾಡಿನಲ್ಲಿ ವಾಸವಿರುವ ಎಲ್ಲಾ ಧರ್ಮೀಯ ತುಳು ಭಾಷಿಗರು ಒಂದೆಡೆ ಸೇರಿ ಪ್ರತಿ ವರ್ಷ ತುಳು ವೈಭವೋ ಕಾರ್ಯಕ್ರಮ ಯಶಸ್ವಿಯಾಗಿ ಪೂರೈಸಿಕೊಂಡು ಬರಲಾಗಿದೆ. ಅಲ್ಲದೇ ತುಳುಕೂಟದಿಂದ ಸಮಾಜಮುಖಿ ಕಾರ್ಯ ನಡೆಸುವ ಜತೆಗೆ ಭಾಷೆ ಬೆಳವಣಿಗೆಗೆ ಉತ್ತೇಜನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿಯೂ ಕೂಡ ತುಳು ವೈಭವೋ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ನಿರ್ದೇಶಕ ವಸಂತ್ ಎಸ್.ಪೂಜಾರಿ ಮಾತನಾಡಿ, ಅಂದು ಸಂಜೆ 5 ಗಂಟೆಗೆ ಸುಂದರ ಬಿಳಗುಳ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಪುತ್ತೂರಿನ ವಿಶ್ರಾಂತ ಪ್ರಾದ್ಯಾಪಕ ಡಾ.ನರೇಂದ್ರ ರೈ ದೇರ್ಲ, ಕಾಫಿ ಬೆಳೆಗಾರ ಕೃಷ್ಣಶೆಟ್ಟಿ ಕಳಸ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ನಂತರ ಕುಡ್ಲದ ಅಮ್ಮ ಕಲಾವಿದರ ತಂಡದಿಂದ ಆನ್ಮಗೆ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ. ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ತುಳುಕೂಟದ ಗೌರವಾಧ್ಯಕ್ಷರಾದ ಜಾನಪ್ಪ ಮಾಸ್ಟರ್, ಪ್ರಧಾನ ಕಾರ್ಯದರ್ಶಿ ಶೇಖರ್ ಬಿಳಗುಳ, ಖಜಾಂಚಿ ಹಸೈನರ್ ಬಿಳಗುಳ, ಉಪಾಧ್ಯಕ್ಷ ದಿನಕರ ಆಚಾರ್ಯ, ವಿಶ್ವಕುಮಾರ್, ಟಿ.ಹರೀಶ್ ಸೇರಿದಂತೆ ತುಳು ಕೂಟದ ಸದಸ್ಯರು ಉಪಸ್ಥಿತರಿದ್ದರು.
