ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಬಣಕಲ್ನಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮೋತ್ಸವದ ಅಂಗವಾಗಿ ಈದ್ ಮಿಲಾದ್ ಉತ್ಸವ ಭಕ್ತಿ–ಭಾವನೆಯಿಂದ ಜರುಗಿತು. ನಬಿಯವರ ಶಾಂತಿ, ಮಾನವೀಯತೆ, ದಯೆ ಮತ್ತು ಸೌಹಾರ್ದದ ಸಂದೇಶಗಳನ್ನು ಸ್ಮರಿಸುವ ಈ ಆಚರಣೆ ಪಟ್ಟಣದ ಎಲ್ಲೆಡೆ ಹರ್ಷೋಲ್ಲಾಸದ ವಾತಾವರಣವನ್ನು ನಿರ್ಮಿಸಿತು.

ಮಾಜಿ ಸೈನಿಕ ದಿನೇಶ್ ಅವರ ಲೇಔಟ್ ಆವರಣದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬಣಕಲ್ ಹೋಬಳಿಯ ಆರು ಮಸೀದಿಗಳ ಜಮಾತ್ ಬಾಂಧವರೆಲ್ಲರೂ ಸಾಮೂಹಿಕವಾಗಿ ಹಾಜರಿದ್ದು ಉತ್ಸವಕ್ಕೆ ವೈಭವ ಹೆಚ್ಚಿಸಿದ್ರು.
ವೇದಿಕೆಯ ಅಧ್ಯಕ್ಷ ಬಣಕಲ್ ಪ್ಲಾಂಟರ್ ಅಸ್ಘರ್ ಅಹಮದ್ ಹಾಗೂ ವಿವಿಧ ಕಡೆಯಿಂದ ಬಂದ ಧರ್ಮ ಗುರುಗಳು ಕಾರ್ಯಕ್ರಮದಲ್ಲಿದ್ದರು.
ಚಕಮಕಿ ಮಸೀದಿಯಿಂದ ಪ್ರಾರಂಭವಾದ ಮೆರವಣಿಗೆ ಬಣಕಲ್ ಪಟ್ಟಣದ ರಾಜ ಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿತು. ನಬಿಯವರ ಪವಿತ್ರ ಉಪದೇಶಗಳ ಪಠಣ, ಭಕ್ತಿಯ ಘೋಷಣೆಗಳು ಮತ್ತು ಭಕ್ತರ ಉತ್ಸಾಹ ಭರಿತ ಪಾಲ್ಗೊಳ್ಳುವಿಕೆ ಮೆರವಣಿಗೆಯ ಮೆರಗನ್ನ ಹೆಚ್ಚಿಸಿತು.
ಕಾರ್ಯಕ್ರಮವನ್ನು ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ನೆರವೇರಿಸಲು ಬಣಕಲ್ ಹಾಗೂ ಮೂಡಿಗೆರೆ ಪೊಲೀಸ್ ಇಲಾಖೆ ವಿಶೇಷ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು.
