Thursday, February 12, 2026
Homeಜಿಲ್ಲಾಸುದ್ದಿಚನ್ನರಾಯಪಟ್ಟಣ: ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಸಿ.ಎನ್. ಬಾಲಕೃಷ್ಣ: 35 ಕೋಟಿ ವೆಚ್ಚದಲ್ಲಿ ಏತ ನೀರಾವರಿ!

ಚನ್ನರಾಯಪಟ್ಟಣ: ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಸಿ.ಎನ್. ಬಾಲಕೃಷ್ಣ: 35 ಕೋಟಿ ವೆಚ್ಚದಲ್ಲಿ ಏತ ನೀರಾವರಿ!

ಹಾಸನ: 35 ಕೋಟಿ ವೆಚ್ಚದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಯಿಂದ ಎಂ. ಶಿವರ ಗ್ರಾಮದ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಹೋಬಳಿಯ ಎಂ. ಶಿವರ ಗ್ರಾಮದ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು. , ‘ಈ ಯೋಜನೆಯಿಂದ ತಗಡೂರು ಎಂ. ಶಿವರ, ಕೆಂಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಸುಮಾರು 18ಕ್ಕೂ ಹೆಚ್ಚು ಕೆರೆಗಳು ಬರಲಿದ್ದು, ಯೋಜನೆಗೆ 2019ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನನ್ನ ಮನವಿ ಮೇರೆಗೆ ಈ ಯೋಜನೆಗೆ ₹35 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು.

ಕಳೆದ ವರ್ಷದ ಬೇಸಿಗೆಯಲ್ಲಿ ತಾಂತ್ರಿಕವಾಗಿ ಚಾಲನೆ ನೀಡಲಾಗಿತ್ತು, ಈ ವರ್ಷದ ಪೂರ್ವಹಂಗಾಮಿನಲ್ಲಿ ನವಿಲೆ ಬಳಿ ಇರುವ ಜಾಕ್‌ವೆಲ್‌ನಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಏತ ನೀರಾವರಿ ಯೋಜನೆಯಲ್ಲಿ ಪ್ರಥಮವಾಗಿ ಎಂ. ಶಿವರ ಕೆರೆ ಸಂಪೂರ್ಣವಾಗಿ ತುಂಬಿ ಕೊಡಿ ಬಿದ್ದಿದೆ. ಈ ಭಾಗದ ರೈತರ ದಶಕಗಳ ಕನಸು ನನಸಾಗಿದೆ’ ಎಂದರು.

ಈ ಯೋಜನೆ ಪೂರ್ಣಗೊಳಿಸುವಷ್ಟರಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ನನಗೆ ರೈತರ ಹಿತ ಮುಖ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಬಿದರೆ, ಕೆಂಬಾಳು, ಮಾದಗೌಡನಹಳ್ಳಿ ಸೇರಿದಂತೆ ಎಲ್ಲಾ ಕೆರೆಗಳನ್ನು ತುಂಬಿಸಲು ಆದ್ಯತೆ ನೀಡುತ್ತೇನೆ’ ಎಂದು ತಿಳಿಸಿದರು.

‘ಈ ಏತ ನೀರಾವರಿ ಯೋಜನೆಗೆ ಪೈಪ್‌ಲೈನ್‌ ಮೂಲಕ ನೀರು ಹರಿಸಲಾಗುತ್ತಿದ್ದು, ಬಲ ಮತ್ತು ಎಡ ಭಾಗದ ಕೆರೆಗಳಿಗೆ ಅನುಗುಣವಾಗಿ ಸ್ವಲ್ಪವೂ ನೀರು ಪೋಲಾಗದೆ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಈ ಯೋಜನೆ ನೂರಕ್ಕೆ ನೂರರಷ್ಟು ಸಂಪೂರ್ಣ ಯಶಸ್ವಿಯಾಗಿದೆ’ ಎಂದರು., ನನ್ನ ಹಾಗೂ ತಾಲ್ಲೂಕಿನ ಅನೇಕ ನಾಯಕರ ಒತ್ತಾಯದ ಮೇರೆಗೆ ದಿಡಗ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಗೆ ಇತ್ತೀಚೆಗೆ ನಡೆದ ಸಚಿವಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ನೀಡಿದ್ದಾರೆ. ರೈತರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ’ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ರಾಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ, ಟಿಎಪಿಎಂಎಸ್ ಅಧ್ಯಕ್ಷ ಮರಗೂರು ಅನಿಲ್, ಉದ್ಯಮಿ ಭುವನಹಳ್ಳಿ ಯೋಗೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ನಯನ ಮಧು, ಕುಂಬಾರಹಳ್ಳಿ ರಮೇಶ್, ಓಬಳಾಪುರ ಬಸವರಾಜು, ವಿ.ಎನ್. ಮಂಜುನಾಥ್, ವಿಎಸ್‌ಎಸ್ ಮಾಜಿ ಅಧ್ಯಕ್ಷ ಪುರುಷೋತ್ತಮ್, ಮುಖಂಡರಾದ ನಂಜೇಶ್ ಗೌಡ್ರು, ರಾಜು, ನವೀನ್, ಬಾಬು, ಗುಡಿ ಗೌಡ್ರುಗಳಾದ ಚೆಲುವೇಗೌಡ, ಕುಮಾರ್, ಲಕ್ಷ್ಮಿ ಬೂದೇಶ್, ಶ್ರೀನಿವಾಸ್, ಸಂಪತ್ ಕುಮಾರ್, ಗೋವಿನಕೆರೆ ರಾಮು, ಕಿಟ್ಟಿ, ಜಯರಾಮ್ ಹಾಗೂ ಗ್ರಾಮಸ್ಥರು ಹಾಜರಿದ್ದರು. ,

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!