ಚಿಕ್ಕಮಗಳೂರು: ತಾಲೂಕಿನ ಕದ್ರಿಮಿದ್ರಿ ಗ್ರಾಮದಲ್ಲಿ ಕಾಫಿ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾರೀ ಅನಾಹುತ ಸಂಭವಿಸಿದೆ. ಗ್ರಾಮದ ಧರ್ಮೇಗೌಡ ಅವರಿಗೆ ಸೇರಿದ ತೋಟದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ವ್ಯಾಪಿಸಿ, ಇಡೀ ಪ್ರದೇಶವನ್ನೇ ಆವರಿಸಿಕೊಂಡ ಪರಿಣಾಮ ಸಂಪೂರ್ಣ ತೋಟ ಭಸ್ಮವಾಗಿದೆ.

ಈ ದುರ್ಘಟನೆಯಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿದ್ದ 1300 ಕಾಫಿ ಗಿಡಗಳು ಬೆಂಕಿಗೆ ಆಹುತಿಯಾಗಿವೆ. ಇದಲ್ಲದೆ, ಕಾಫಿ ಗಿಡಗಳಿಗೆ ಆಸರೆಯಾಗಿದ್ದ ಸುಮಾರು 300 ಬೆಲೆಬಾಳುವ ಸಿಲ್ವರ್ ಮರಗಳು ಹಾಗೂ 150ಕ್ಕೂ ಹೆಚ್ಚು ಮೆಣಸಿನ ಬಳ್ಳಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಮಕ್ಕಳಂತೆ ಪೋಷಿಸಿ ಬೆಳೆಸಿದ ಗಿಡಮರಗಳು ಕಣ್ಣೆದುರೇ ಸುಟ್ಟು ಬೂದಿಯಾಗಿರುವ ದೃಶ್ಯ ಬೆಳೆಗಾರ ಧರ್ಮೇಗೌಡ ಹಾಗೂ ಅವರ ಕುಟುಂಬದವರನ್ನು ಮನಕಲಕುವಂತಾಗಿದೆ. ಬೆಂಕಿ ತಗುಲಲು ನಿಖರವಾದ ಕಾರಣ ತಿಳಿದುಬಂದಿಲ್ಲದಿದ್ದರೂ, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಘಟನೆಯಿಂದ ಬೆಳೆಗಾರನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.
