ಚಿಕ್ಕಮಗಳೂರು: ”ಕರ್ನಾಟಕದ ಅಯೋಧ್ಯೆ” ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರಿನಲ್ಲಿ ಬುಧವಾರ ದತ್ತ ಜಯಂತಿಯ ಉತ್ಸವ ನಡೆಯಲಿದೆ. ಈಗಾಗಲೇ ಸಂಭ್ರಮ ಜೋರಾಗಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮೇಳ ಮತ್ತು ಶೋಭಾಯಾತ್ರೆ ತಯಾರಿ ಇತ್ಯಾದಿ ವಿವಿಧ ರೀತಿಯ ಕಾರ್ಯಗಳು ಸಾಂಗವಾಗಿ ಜರುಗುತ್ತಿವೆ.
ಅದ್ದೂರಿ ಶೋಭಾಯಾತ್ರೆ
ದತ್ತ ಜಯಂತಿಯ ಪ್ರಮುಖ ಆಕರ್ಷಣೆಯೆಂದರೆ ದತ್ತ ಜಯಂತಿಯ ಶೋಭಾಯಾತ್ರೆ, ನಾಳೆ ಅದ್ದೂರಿ ಶೋಭಾಯಾತ್ರೆ ನಡೆಯಲಿದ್ದು, ಸುಮಾರು 30 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಾಳೆ ನಡೆಯುವ ಶೋಭಾಯಾತ್ರೆ ನಗರದ ಓಂಕಾರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ, ಆಜಾದ್ ಪಾರ್ಕ್ ವೃತ್ತದವರೆಗೆ ಸಾಗಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶೋಭಾಯಾತ್ರೆಯಲ್ಲಿ ಯುವಜನತೆ, ಮಹಿಳೆಯರು ಮತ್ತು ಹಿರಿಯ ನಾಗರಿಕರು ಎಲ್ಲರೂ ಭಾಗವಹಿಸುವ ನಿರೀಕ್ಷೆ ಇದೆ. ಸುಮಾರು 15000ಕ್ಕೂ ಹೆಚ್ಚು ಭಕ್ತಾದಿಗಳು ದತ್ತಪೀಠಕ್ಕೆ ಭೇಟಿ ನೀಡಲಿದ್ದಾರೆ.
ಇಂದು ಅನಸೂಯ ಜಯಂತಿಯ ಸಂಭ್ರಮ ವಿಶೇಷ ಕಾರ್ಯಕ್ರಮ
ದತ್ತ ಜಯಂತಿಗೆ ಪೂರ್ವಭಾವಿಯಾಗಿ ಇಂದು ಚಿಕ್ಕಮಗಳೂರು ನಗರದಲ್ಲಿ ಅನಸೂಯ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ 3000ಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ರು. ಮೆರವಣಿಗೆಯಲ್ಲಿ ದತ್ತಾತ್ರೇಯ ಜಪ ಮಾಡುತ್ತಾ, ಅನುಸೂಯ ದೇವಿಯನ್ನ ಸ್ತುತಿಸುತ್ತ ದತ್ತಗಿರಿಯ ಅನುಸೂಯಾ ಮಂದಿರಕ್ಕೆ ಶೋಭಾಯಾತ್ರೆಯ ಮೂಲಕ ಭೇಟಿ ನೀಡಿದರು.
ಭದ್ರತೆ ಮತ್ತು ವ್ಯವಸ್ಥೆ
ಶೋಭಾಯಾತ್ರೆ ನಡೆಯುವ ಮಾರ್ಗದಾದ್ಯಾಂತ ಪೊಲೀಸರು ಕಠಿಣ ಭದ್ರತೆ ವಹಿಸಿದ್ದಾರೆ. ಶೋಭಾಯಾತ್ರೆಯ ವೇಳೆ ಸಾಮಾನ್ಯರು ಹಾಗೂ ಭಕ್ತರು ಸುಲಭವಾಗಿ ಸಾಗಲು ಸುರಕ್ಷಿತ ವ್ಯವಸ್ಥೆ ಮಾಡಲಾಗಿದೆ. ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು ಹಾಗೂ ಸಾರ್ವಜನಿಕರು ಎಲ್ಲರೂ ಹಬ್ಬದ ಭಾಗವಾಗಿರುವುದರಿಂದ ಇಡೀ ಶೋಭಾಯಾತ್ರೆ ಪೊಲೀಸ್ ಕಣ್ಗಾವಲಿನಲ್ಲಿ ಇದ್ದು ಅತ್ಯಂತ ಬಿಗಿ ಭದ್ರತೆಯಿಂದ ಇಡೀ ಶೋಭಾಯಾತ್ರೆ ನಡೆಯಲಿದೆ. ಒಟ್ಟಿನಲ್ಲಿ ನಾಳೆ ನಡೆಯಲಿರುವ ಬೃಹತ್ ಶೋಭಯಾತ್ರೆಯಲ್ಲಿ ಸಾವಿರಾರು ಜನರ ಸಮಾಗಮವಾಗಲಿದ್ದು, ಕಾಫಿನಾಡಿನ ಜನ ಕುತೂಹಲದಿಂದ ಕಾಯುತ್ತಿದ್ದಾರೆ.
