ಚಿಕ್ಕಮಗಳೂರು: ಹಿಂದೂ ಮನೆಯ ಮೇಲೆ ಮುಸ್ಲಿಂ ಯುವಕರು ಒಂದು ವಾರದಿಂದ ನಿರಂತರ ಕಲ್ಲುತೂರಾಟ ನಡೆಸುತ್ತಿರುವ ಘಟನೆ ಚಿಕ್ಕಮಗಳೂರು ನಗರದ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ಹೌದು .. ಕಳೆದ ಒಂದು ವಾರದಿಂದ ಹಿಂದೂ ಮನೆಯೊಂದರ ಮೇಲೆ ನಿರಂತರ ಕಲ್ಲು ತೂರಾಟ ನಡೆದ ಆರೋಪ ಕೇಳಿಬಂದಿದ್ದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಬ್ಬರು ಯುವಕರನ್ನು ಬಜರಂಗದಳದ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಪೊಲೀಸ್ ಠಾಣೆ ಎದುರೇ ಬಜರಂಗದಳ, ಎಸ್ಡಿಪಿಐ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಎರಡು ಗುಂಪುಗಳನ್ನ ಸಮಧಾನ ಪಡಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಇದರಿಂದಾಗಿ ಸ್ಥಳದಲ್ಲಿ ಸೋಮವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಸದ್ಯ ಪ್ರಕರಣದ ತನಿಖೆಯನ್ನು ಬಸವನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಕೈಗೊಂಡಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಕಲ್ಲು ತೂರಾಟ ಮಾಡುತ್ತಿದ್ದಾರೆ. ಅವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾನು ಕೆಲಸಕ್ಕೆ ಹೋಗುತ್ತೇನೆ. ತಾಯಿ ,ತಂಗಿ ಇಬ್ಬರೇ ಮನೆಯಲ್ಲಿ ಇರುತ್ತಾರೆ. ಮಧ್ಯಾಹ್ನ ರಾತ್ರಿ ವೇಳೆಯಲ್ಲಿ ಕಲ್ಲು ಎಸೆಯುತ್ತಾರೆ. ನಾವು ಪೊಲೀಸರಿಗೆ ದೂರು ನೀಡಿದ್ದೆವು. ಸೋಮವಾರ ರಾತ್ರಿ ಕೂಡ ಮನೆಗೆ ಕಲ್ಲು ಎಸೆದಿದ್ದಾರೆ. ಅದನ್ನು ಹೊರಗೆ ಇದ್ದ ತಾಯಿ ಹಾಗೂ ತಂಗಿ ಪ್ರಶ್ನೆ ಮಾಡಿದ್ದಾರೆ. ಆಗ ಅವರ ಜೊತೆ ಯುವಕರು ಜಗಳ ಮಾಡಿದ್ದಾರೆ ಎಂದು ಮನೆ ಮಾಲೀಕ ಗಗನ್ ಆರೋಪಿಸಿದ್ದಾರೆ.
ಹಾಗೆ ಇನ್ನೊಂದೆಡೆ ಎಸ್ಡಿಪಿಐ ಮುಖಂಡ ಮುನೀರ್ ಮಾತನಾಡಿ, ಮುಸ್ಲಿಂ ಯುವಕರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಸಂಬಂಧಪಟ್ಟವರ ವಿರುದ್ಧ ಕೇಸ್ ದಾಖಲಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಾಗೆ ಸ್ಟೇಷನ್ ಒಳಗೆ ಪ್ರತಿಭಟನೆ ಮಾಡಿದ್ದಾರೆ, ಅವರ ಮೇಲೆ ಕೇಸ್ ದಾಖಲಿಸಬೇಕು, ನಮ್ಮ ಹುಡುಗರ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ಹೇಳಿದರು.
ಮನೆಯ ಮೇಲೆ ಕಲ್ಲು ತೂರಿದ ಆರು ಜನ ಯುವಕರ ಬಂಧನಕ್ಕೆ ಭಜರಂಗದಳ ,ಬಿಜೆಪಿ ಪಟ್ಟು ಹಿಡಿದಿವೆ. ಪರಿಣಾಮವಾಗಿ ಪೊಲೀಸ್ ಠಾಣೆ ಎದುರು ಕೆಲಕಾಲ ಹೈಡ್ರಾಮಾವೇ ನಡೆದಿದೆ. ಎರಡೂ ಸಮುದಾಯದ ಯುವಕರು ಜಮಾವಣೆಗೊಂಡು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಡಿಷನಲ್ ಎಸ್ಪಿ ಜಯಕುಮಾರ್ ನೇತೃತ್ವದಲ್ಲಿ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.
