ಚಿಕ್ಕಮಗಳೂರು: ಹೊಸ ವರ್ಷದ ಆಚರಣೆಗೆ ಕಾಫಿನಾಡು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ವರ್ಷದ ಕೊನೆ ವೀಕ್ ಎಂಡ್ನಲ್ಲಿ ಕಾಫಿನಾಡ ದಶದಿಕ್ಕುಗಳ ಸೌಂದರ್ಯ ಸವಿಯುತ್ತಿರೋ ಪ್ರವಾಸಿಗರು ಕಾಫಿನಾಡಲ್ಲೇ ಹೊಸ ವರ್ಷಕ್ಕೆ ವೆಲ್ ಕಂ ಹೇಳೋದಕ್ಕೆ ಕಾತುರದಿಂದ ಕಾಯ್ತಿದ್ದಾರೆ. ಇನ್ನು ಹೊಸ ವರ್ಷಕ್ಕೆ ಮೂರ್ನಾಲ್ಕು ದಿನ ಇರುವಾಗಲೇ ಕಾಫಿನಾಡು ಸೇರಿರೋ ಪ್ರವಾಸಿಗರು ಹೊಸ ವರ್ಷದ ಆಚರಣೆಗೆ ಪ್ಲ್ಯಾನ್ ಕೂಡ ಮಾಡ್ತಿದ್ದಾರೆ.
ಈಗಾಗಲೇ ವರ್ಷಾಂತ್ಯದ ಸಾಲು ರಜೆ ನಡುವೆ ಪ್ರವಾಸಿಗರು ಜಿಲ್ಲೆಗೆ ಲಗ್ಗೆ ಇಟ್ಟಿದ್ದು, ಎಲ್ಲಾ ಹೋಂಸ್ಟೇ, ರೆಸಾರ್ಟ್ಗಳು ಭರ್ತಿಯಾಗಿವೆ.ಶನಿವಾರ, ಭಾನುವಾರ ವೀಕೆಂಡ್. ಬುಧವಾರ ಹೊಸ ವರ್ಷ. ಸೋಮವಾರ-ಮಂಗಳವಾರ ಅದಕ್ಕಾಗಿ ಸಿದ್ಧತೆ. ಪ್ರಕೃತಿಯ ಸೂರಿನಡಿ ಕಾಫಿನಾಡ ಸೌಂದರ್ಯ ಸವಿಯುತ್ತ ಹೊಸ ವರ್ಷಕ್ಕೆ ವೆಲ್ಕಂ ಹೇಳೋದಕ್ಕೆ ಲಕ್ಷಾಂತರ ಪ್ರವಾಸಿಗ್ರು ಕಾತರದಿಂದಿದ್ದಾರೆ. ಈ ವರ್ಷದ ಮಹಾಮಳೆಯ ಮಧ್ಯೆಯೂ ಕಾಫಿನಾಡಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಸೀತಾಳಯ್ಯನಗಿರಿ, ಶೃಂಗೇರಿ, ಹೊರನಾಡು, ಕುದುರೆಮುಖ ಸೇರಿದಂತೆ ಪ್ರಮುಖ ಗಿರಿಶಿಖರಗಳಲ್ಲಿ ಪ್ರವಾಸಿಗರು ಬುಧವಾರದ ರಾತ್ರಿಗಾಗಿ ಹಾತೊರೆಯುತ್ತಿದ್ದಾರೆ. ಅಪರೂಪದ ಪ್ರಕೃತಿ ಸೌಂದರ್ಯ ಕಂಡು ಮಲೆನಾಡ ಮಡಿಲಲ್ಲಿ ಮೈಮರೆಯುತ್ತಿದ್ದಾರೆ. ಬೆಟ್ಟಗುಡ್ಡಗಳ ನಡುವೆ ಹಾದು ಹೋಗುವ ಮೋಡಗಳ ಕಣ್ಣಾಮುಚ್ಚಾಲೆ ಕಂಡು ಪುಳಕಿತರಾಗ್ತಿದ್ದು, ಶನಿವಾರ-ಭಾನುವಾರ ಶಾರದಾಂಭೆ ಹಾಗೂ ಅನ್ನಪೂರ್ಣೇಶ್ವರಿಯ ದರ್ಶನ ಪಡೆದು, ಸೋಮವಾರ-ಮಂಗಳವಾರ ಹೊಸ ವರ್ಷದ ಆಚರಣೆಗೆ ಸಿದ್ಧತೆ ಮಾಡ್ಕೊಂಡು ಬುಧವಾರ ರಾತ್ರಿಯಾಗೋದನ್ನೇ ಎದುರು ನೋಡ್ತಿದ್ದಾರೆ.
ತಂಡೋಪ ತಂಡವಾಗಿ ಸುತ್ತಾಡಿದರು. ಬಹುತೇಕರು ಕಾರುಗಳಲ್ಲಿ ಬಂದಿದ್ದರಿಂದ ಚಿಕ್ಕಮಗಳೂರು ನಗರ ಸೇರಿ ಎಲ್ಲೆಡೆ ವಾಹನ ದಟ್ಟಣೆ ಉಂಟಾಗಿತ್ತು. ಹೆದ್ದಾರಿಗಳಲ್ಲೂ ಕಾರುಗಳ ಸಾಲು ದೊಡ್ಡದಾಗಿತ್ತು. ಅದರಲ್ಲೂ ರಾಜ್ಯದ ಅತೀ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿಯಲ್ಲಿ ಆಹ್ಲಾದಕರ ಅನುಭವ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು.
ಮುಳ್ಳಯ್ಯನಗಿರಿ ರಸ್ತೆಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರವಾಸೋದ್ಯಮ ಇಲಾಖೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಮಿತ್ರರನ್ನು ನೇಮಿಸಿದ್ದು, ಅವರು ಕೂಡ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಿದರು. ಶೃಂಗೇರಿ, ಕಳಸ, ಹೊರನಾಡು, ಅಮೃತಾಪುರ ದೇಗುಲಗಳಿಗೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಪ್ರವಾಸಿಗರು ಹೆಚ್ಚಾಗಿದ್ದರಿಂದ ಕೆಎಸ್ಆರ್ಟಿಸಿ ಬಸ್ಗಳು ಕೂಡ ಭರ್ತಿಯಾಗಿ ಕಾರ್ಯಾಚರಣೆ ಮಾಡಿದವು.
ಹೊಸ ವರ್ಷ ವಾರದ ಮಧ್ಯದಲ್ಲಿ ಬಂದಿರೋದು ಪ್ರವಾಸಿಗರು ಹಾಗೂ ಯುವಜನತೆಗೆ ಒಂಚೂರು ಬೇಜಾರು ತರಿಸಿದೆ. ಆದ್ರೆ, ಕೆಲ ಪ್ರವಾಸಿಗರು ಇಡೀ ವಾರ ಕಾಪಿನಾಡಲ್ಲೇ ಉಳಿಯೋದಕ್ಕೂ ಕೂಡ ಪ್ಲ್ಯಾನ್ ಮಾಡಿದ್ದಾರೆ.
