ಚಿಕ್ಕಮಗಳೂರು: ಮೆಡಿಕಲ್ ಕಾಲೇಜು ವಿಚಾರವಾಗಿ ಶಾಸಕ ತಮ್ಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ರಾಜಕೀಯ ಜಟಾಪಟಿ ಮುಂದುವರೆದಿದೆ. ಶಾಸಕ ತಮ್ಮಯ್ಯ ಆರೋಪಕ್ಕೆ ವಾಗ್ದಾಳಿ ನಡೆಸಿರುವ ಸಿ.ಟಿ. ರವಿ, ನಾನು ಯಾರ ಮೇಲೂ ಆರೋಪ ಮಾಡಿಲ್ಲ. ಅಹಂಕಾರದ ಮಾತಾಡೋದು ಬೇಡ, ನನಗೂ ಅಹಂಕಾರದ ಮಾತು ಬರುತ್ತೆ ಎಂದು ಶಾಸಕ ತಮ್ಮಯ್ಯಗೆ ಸಿ.ಟಿ. ರವಿ ಎಚ್ಚರಿಕೆ ನೀಡಿದ್ದಾರೆ.

ಅಹಂಕಾರದ ಮಾತುಗಳನ್ನಾಡುವ ಕೆಲವರು ಬ್ಯಾಗ್ ಇಟ್ಟುಕೊಂಡು ಓಡಾಡುತ್ತಿದ್ರು, ಬೋಕರ್ ಕೆಲಸ ಮಾಡುತ್ತಿದ್ದುದು ನನಗೆ ಗೊತ್ತು ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ. ನಗರಸಭೆ ದುಡ್ಡಲ್ಲಿ ಪೆಟ್ರೋಲ್-ಡೀಸೆಲ್ ಹಾಕಿಸಿಕೊಂಡು ಬೆಂಗಳೂರಿಗೆ ಬರ್ತಿದ್ದ ಅಯೋಗ್ಯರು ನನ್ನ ಬಗ್ಗೆ ಮಾತಾಡ್ತಾರೆ. ಅಧಿಕಾರಿಗಳ ಹತ್ರ ಖರ್ಚಿಗೆ ದುಡ್ಡು ಕೊಡು ಅಂತ ಕೇಳಿದಂತಹ ಅಯೋಗ್ಯರೆಲ್ಲ ನಾಲಿಗೆ ಹರಿಬಿಟ್ರೆ ಗೊತ್ತಿದೆ ಅವರ ಅಯೋಗ್ಯತನ ಎಂದು ಕಿಡಿಕಾರಿದರು.
ತಾವು ಜನರ ಸಮಸ್ಯೆಗಳನ್ನಿಟ್ಟುಕೊಂಡು ವಿಧಾನಸಭೆ ಒಳಗೂ ಮತ್ತು ಹೊರಗೂ ಮಾತನಾಡಿದ್ದೇನೆ. ವೈದ್ಯಕೀಯ ಕಾಲೇಜಿನ ಸಮಸ್ಯೆಗಳ ಬಗ್ಗೆ ಮಾತ್ರ ಗಮನ ಸೆಳೆದಿದ್ದೇನೆ, ತಾವು 20 ವರ್ಷ ಶಾಸಕನಾದ್ರೂ ಅಧಿಕಾರ ಮದ ತಮಗಾಗಲಿ ನನ್ನ ಮಕ್ಕಳಿಗಾಗಲಿ ಏರಿಲ್ಲ. ಯಾರೋ ಒಬ್ಬ ಅಯೋಗ್ಯ ಕೆಲಸ ಮಾಡಿಲ್ಲ ಅಂತ ಹೇಳಿಲ್ಲ, ಕಮಿಷನ್ ಹೊಡೆಯೋದಕ್ಕೆ ಹೋಗ್ತಾ ಇದ್ದಾನೆ ಅಂತ ಏನಾದ್ರೂ ಆರೋಪ ಮಾಡಿದ್ದ? ಕೇವಲ ಸಮಸ್ಯೆ ಇದೆ ಅಂತ ಹೇಳಿದ್ದೆ ಎಂದು ತಿರುಗೇಟು ನೀಡಿದ್ರು.
ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಹಳೆಯದಕ್ಕೆ ಮಾತನಾಡುವುದು, ಕುಣಿಲಾರದವರು ನೆಲ ಡೊಂಕು ಅಂದ ಹಾಗಿದೆ. ಇವತ್ತು ಆರೋಪ ಮಾಡುತ್ತಿರುವವರು ಸಿ.ಟಿ. ರವಿಗೆ ಜೈ ಅಂದವರು ಎಂದು ಟೀಕಿಸಿದರು. ಮೆಡಿಕಲ್ ಕಾಲೇಜು ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳಿಗೂ ಪತ್ರ ಬರೆದು ಗಮನಕ್ಕೆ ತಂದಿರುವುದಾಗಿ ತಿಳಿಸಿದರು.
ಎಲ್ಲಾ ಮಕ್ಕಳು ನಮ್ಮ ಮಕ್ಕಳು ತರಾನೇ ಅನ್ನುವಂತ ಭಾವನೆ ಇರೋ ತನಕ ತಂದಿದ್ದೀನಿ. ನನ್ನ ಮಕ್ಕಳ ಬಗ್ಗೆ ಮಾತ್ರ ಆಗಿದ್ರೆ ನಾನು ಅಲ್ಲಿಗೆ ಹೋಗಿ ಆ ಕಷ್ಟ ನೋಡಬೇಕಾದ ಅವಶ್ಯಕತೆನೇ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
