ಚಿಕ್ಕಮಗಳೂರು : ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕದನ , ಅಧಿಕಾರ ಹಂಚಿಕೆ ಕುರಿತಂತೆ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ಏನೂ ಇಲ್ಲ, ಮುಖ್ಯಮಂತ್ರಿ ಬದಲಾವಣೆ ಮಾಡಬೇಕೇ?, ಬೇಡವೇ? ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ರಾಹುಲ್ ಗಾಂಧಿ ಬಳಿ ನಾನು ಮತ್ತು ಡಿ.ಕೆ.ಶಿವಕುಮಾರ್ ಸಮಯ ಕೇಳಿದ್ದು ಬೇರೆ ಬೇರೆ ವಿಷಯಕ್ಕೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ದಿಲ್ಲಿಗೆ ರಾಜ್ಯದ ವಿಷಯದ ಬಗ್ಗೆ ಚರ್ಚೆ ಮಾಡಲು ಹೋಗಿಲ್ಲ. ರಾಮಲೀಲಾ ಮೈದಾನದಲ್ಲಿ ವೋಟ್ ಚೋರಿ ಸಮಾವೇಶದ ಕುರಿತು ಚರ್ಚೆಗೆ ಹೋಗಿದ್ದೆ. ರಾಜ್ಯದ ವಿಚಾರವನ್ನು ನಾನು ಚರ್ಚೆ ಮಾಡುವುದೇ ಇಲ್ಲ ಎಂದರು. ಈ ವಿಷಯದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅಲ್ಲಿಯವರೆಗೂ ಎಲ್ಲರೂ ಕಾಯಬೇಕೆಂದು ಹೇಳಿದರು.
ಕೆಲವರು ಅಧಿಕಾರ ದೊಡ್ಡದು ಎಂದು ಭಾವಿಸಿರಬಹುದು. ನನಗೆ ಅದು ದೊಡ್ಡದಲ್ಲ, ಸಿದ್ಧಾಂತ ದೊಡ್ಡದು ಎಂದ ಹರಿಪ್ರಸಾದ್, ಇತ್ತೀಚಿನ ಬೆಳವಣಿಗೆಯಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ದೊಡ್ಡವರು ಯೋಚನೆ ಮಾಡಬೇಕೆಂದು ಸಲಹೆ ನೀಡಿದರು.
