ಕೊಟ್ಟಿಗೆಹಾರ: ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಾದ್ಯಂತ ಸಂಚರಿಸುವ ಜಾಥಾವು ಕೊಟ್ಟಿಗೆಹಾರ ಪಟ್ಟಣಕ್ಕೆ ಆಗಮಿಸಿತು. ಪಟ್ಟಣದ ಅನಿಲ್ ಹೋಟೆಲ್ ಎದುರು ನಡೆದ ಕಾರ್ಯಕ್ರಮದಲ್ಲಿ, ಹೋಟೆಲ್ನ ದಿವಂಗತ ಮಾಲೀಕರಾದ ಮೇರಿಯಮ್ಮನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಂಡ ಕಾರ್ಯಕರ್ತರು ‘ಲಾಲ್ ಸಲಾಂ’ ಘೋಷಣೆಗಳನ್ನು ಕೂಗಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಅವರು, “ಪ್ರಸ್ತುತ ದೇಶ ಹಾಗೂ ರಾಜ್ಯದಲ್ಲಿ ಕೋಮುವಾದಿ ಮತ್ತು ಕಾರ್ಪೊರೇಟ್ ಶಕ್ತಿಗಳು ಸಾಮಾನ್ಯ ಜನರ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿವೆ. ಬಡತನ, ನಿರುದ್ಯೋಗ, ಭ್ರಷ್ಟಾಚಾರ, ರೈತರ ಆತ್ಮಹತ್ಯೆ ಮತ್ತು ಕಾರ್ಮಿಕರ ಹಕ್ಕುಗಳ ನಾಶದಂತಹ ಸಮಸ್ಯೆಗಳು ಗಂಭೀರವಾಗಿವೆ. ನೆಲ-ಜಲ ಸೇರಿದಂತೆ ಸಾರ್ವಜನಿಕ ಸಂಪತ್ತಿನ ಲೂಟಿ ಅವಿರತವಾಗಿ ನಡೆಯುತ್ತಿದೆ” ಎಂದು ಆರೋಪಿಸಿದರು. ಜೊತೆಗೆ ದಿನೇದಿನೇ ವ್ಯಾಪಿಸುತ್ತಿರುವ ಜಾತಿವಾದ ಮತ್ತು ಕೋಮುವಾದವನ್ನು ಅವರು ತೀವ್ರವಾಗಿ ಖಂಡಿಸಿದರು.
ಈ ಕರಾಳ ಪರಿಸ್ಥಿತಿಯ ವಿರುದ್ಧ ಜನಜಾಗೃತಿ ಮೂಡಿಸಲು ಭಾರತ ಕಮ್ಯುನಿಸ್ಟ್ ಪಕ್ಷವು ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ದಲಿತರು ಮತ್ತು ಆದಿವಾಸಿ ಸಂಘಟನೆಗಳೊಂದಿಗೆ ಕೈಜೋಡಿಸಿ ಈ ರಾಜ್ಯಾದ್ಯಂತ ಜಾಥಾ ನಡೆಸುತ್ತಿದೆ ಎಂದು ಅವರು ವಿವರಿಸಿದರು.
ಸಿಪಿಐ ಮುಖಂಡ ಮೋಣಪ್ಪ ಮಾತನಾಡಿ, “ಹಸಿವಿನಿಂದ ಬಂದವರಿಗೆ ಅನ್ನ ನೀಡಿದ ತಾಯಿ ಎಂದೇ ಜನಪ್ರಿಯರಾಗಿದ್ದ ದಿವಂಗತ ಮೇರಿಯಮ್ಮನವರು ಮಾನವೀಯತೆ ಮತ್ತು ಮಮತೆಯ ಪ್ರತೀಕವಾಗಿದ್ದರು. ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಿಪಿಐ ಮುಖಂಡರು, ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
