ಮೂಡಿಗೆರೆ: ಪ್ರಸಿದ್ಧ ಪ್ರವಾಸಿ ತಾಣವಾದ ದೇವರಮನೆ ಬೆಟ್ಟದಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ಚಲಾಯಿಸಿ ಅದರ ವಿಡಿಯೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದ ಯುವಕರ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಲೆಕ್ಕಿಸದೇ ಸಾಹಸ ಪ್ರದರ್ಶಿಸಿದ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರು ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿದ್ದಾರೆ.
ಬಣಕಲ್ ಪೊಲೀಸ್ ಠಾಣೆಯ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ನ ಸಿಬ್ಬಂದಿ ಅಭಿಷೇಕ್ ಅವರು ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ ನಡೆಸುತ್ತಿದ್ದ ವೇಳೆ ಈ ಅಪಾಯಕಾರಿ ವಿಡಿಯೋ ಪತ್ತೆಯಾಗಿದೆ. ಪರಿಶೀಲನೆ ವೇಳೆ ದೇವರಮನೆ ಬೆಟ್ಟದ ಸಾರ್ವಜನಿಕರು ನಡೆದಾಡುವ ಕಾಲುದಾರಿಯಲ್ಲಿ ಮೂರು ಬೈಕ್ಗಳಲ್ಲಿ ಬಂದ ಯುವಕರ ತಂಡವು ನಿರ್ಲಕ್ಷ್ಯ ಹಾಗೂ ದುಡುಕಿನ ಚಾಲನೆ ನಡೆಸಿರುವುದು ಬೆಳಕಿಗೆ ಬಂದಿದೆ.
ದೇವರಮನೆ ಬೆಟ್ಟದ ಕಾಲುದಾರಿಯಲ್ಲಿ ಯಾವುದೇ ವಾಹನಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಆದರೂ, ಈ ನಿಯಮವನ್ನು ಉಲ್ಲಂಘಿಸಿ ಯುವಕರು ಬೈಕ್ಗಳನ್ನು ಚಲಾಯಿಸಿರುವುದು ಮಾತ್ರವಲ್ಲದೇ, ಹೆಲ್ಮೆಟ್ ಕ್ಯಾಮೆರಾದ ಮೂಲಕ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ರೂಪದಲ್ಲಿ ಹಂಚಿಕೊಂಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ
