ಹಾಸನ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ (93) ನಿಧನಕ್ಕೆ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮಹಾತ್ಮ ಗಾಂಧಿಜಿ ಅವರ ಕಟ್ಟ ಅನುಯಾಯಿಯಾಗಿದ್ದ ಶಿವಣ್ಣ ಅವರು ನನಗೆ ಹಲವು ದಶಕಗಳಿಂದ ಪರಿಚಿತರು. ಇಳಿವಯಸ್ಸಿನಲ್ಲಿ ಹಲವು ಸಕ್ರಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದವರು. ಅವರು ಮಾಡಿದ ಸಾಮಾಜಿಕ ಸೇವೆಯನ್ನು ಬಹಳ ಹತ್ತಿರದಿಂದ ನೀಡಿದ್ದೇನೆ. ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ನಾವಿಲ್ಲಿ ಕಳೆದುಕೊಂಡಿದ್ದೇವೆ ಎಂದು ಮಾಜಿ ಪ್ರಧಾನಿಗಳು ಕಂಬನಿ ಮಿಡಿದರು.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಎಚ್.ಎಂ.ಶಿವಣ್ಣ ಅವರು ಕೆಲವು ದಿನಗಳಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ಮೂಲದವರಾದ ಎಚ್.ಎಂ.ಶಿವಣ್ಣ ಆರೇಳು ದಶಕಗಳಿಂದ ಹಾಸನದಲ್ಲಿ ನೆಲೆಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಎಚ್.ಎಂ.ಶಿವಣ್ಣ ಅವರಿಗೆ ಹಲವು ಪ್ರಶಸ್ತಿಗಳು ಲಭಿಸಿದ್ದವು.
ಪತ್ನಿ, ಎರಡು ಗಂಡು, ಒಂದು ಹೆಣ್ಣು ಮಕ್ಕಳನ್ನು ಎಚ್.ಎಂ.ಶಿವಣ್ಣ ಅಗಲಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಿಧನಕ್ಕೆ ಹಲವು ಗಣ್ಯರ ಸಂತಾಪ ಸೂಚಿಸಿದ್ದಾರೆ
