ಚಿಕ್ಕಮಗಳೂರು: ಕಾಫಿನಾಡಲ್ಲಿ ವರ್ಷದ ಮೊದಲ ಮಳೆಯೇ ರೈತರ ಕಣ್ಣಲ್ಲಿ ನೀರು ತರಿಸಿದೆ. ಮನೆಗಳ ಮುಂದೆ ಒಣಗಿಸಿದ್ದ ಕಾಫಿ ಬೀಜ ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ , ಕಳಸ, ಶೃಂಗೇರಿ, NR ಪುರ ಭಾಗದಲ್ಲಿ ವರುಣ ಅಬ್ಬರಿಸಿದ್ದು, ದಿಢೀರ್ ಸುರಿದ ಮಳೆಯಿಂದ ಜನರು ಕಂಗಾಲಾದರು.
ಇಂದು (ಜ.13) ಮಧ್ಯಾಹ್ನದ ನಂತರ ಏಕಾಏಕಿ ಧಾರಾಕಾರ ಮಳೆ ಬಂದಿದೆ. ಇದರಿಂದ ಮನೆಂಗಳದಲ್ಲಿದ್ದ ಕಾಫಿ ಬೀಜಗಳು ನೀರಲ್ಲಿ ತೇಲಿ ಹೋಗಿವೆ. ಈ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಕಾಲಿಕ ಮಳೆಯ ಹೊಡೆತಕ್ಕೆ ಗಿಡದಲ್ಲೇ ಹಣ್ಣಾಗಿರುವ ಕಾಫಿ ನೆಲಕ್ಕುದುರುತ್ತಿದ್ದರೆ, ಮತ್ತೊಂದೆಡೆ ಕಟಾವಿಗೆ ಬಂದಿರುವ ಭತ್ತದ ಬೆಳೆ ಕೂಡ ನೆಲಕಚ್ಚುವ ಭೀತಿ ಎದುರಾಗಿದೆ
