ಹಾಸನ: ಇರಾನ್- ಇಸ್ರೇಲ್ ಪರಸ್ಪರ ದಾಳಿಯಿಂದಾಗಿ ಮಧ್ಯ ಪ್ರಾಚ್ಯದಲ್ಲಿ ಯುದ್ಧ ಕಾಮೋರ್ಡ ಆವರಿಸಿದೆ. ಇದರಿಂದ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಅಲ್ಲೇ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ವಿಮಾನಗಳು ಕ್ಯಾನ್ಸಲ್ ಆಗಿದ್ದರಿಂದ ಕುವೈತ್, ದುಬೈ, ಅಬುದಾಬಿ ಸೇರಿದಂತೆ ಇತರೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ.
ಹೌದು, ಹಾಸನ ಜಿಲ್ಲೆಯ 50ಕ್ಕೂ ಹೆಚ್ಚು ಮಂದಿ ಈಗ ದುಬೈನಲ್ಲಿ ಸಿಲುಕಿದ್ದು, ಭಾರತ ಸರ್ಕಾರಕ್ಕೆ ಕನ್ನಡಿಗರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ದುಡಿಮೆಗೆಂದು ಕರ್ನಾಟಕದಿಂದ ದುಬೈಗೆ ಹೋಗಿದ್ದ ಕನ್ನಡಿಗರಿಗೆ ಅಮೆರಿಕ ಮತ್ತು ಇಸ್ರೇಲ್ ಯುದ್ದ ಅಡ್ಡಪರಿಣಾಮ ಬೀರಿದೆ. ಕೂಡಲೇ ತಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಅವರು ಮನವಿ ಮಾಡಿದ್ದಾರೆ. ದ್ವೀಪ ರಾಷ್ಟ್ರ ಬಹ್ರೇನ್ನಲ್ಲಿ ಹಾಸನ ಜಿಲ್ಲೆಯ ಐವರು ಸಿಲುಕಿದ್ದಾರೆ. ಬಹ್ರೇನ್ ರಾಜಧಾನಿ ಮನಾಮದಲ್ಲಿರುವ ಮಮತಾ ಎಂಬುವರ ಮನೆಯೊಂದರಲ್ಲಿ ಕನ್ನಡಿಗರು ಆಶ್ರಯ ಪಡೆದಿದ್ದಾರೆ.

ಬೇಲೂರು ತಾಲೂಕಿನ ಅಂಗಡಿಹಳ್ಳಿಯ ಕುಟುಂಬವೊಂದು ಹೇರ್ ಆಯಿಲ್ ಮತ್ತು ಮಸಾಜ್ ಮಾಡುವ ವೃತ್ತಿಯನ್ನು ನಡೆಸುತ್ತಿದ್ದು, ವ್ಯಾಪಾರಕ್ಕಾಗಿ ದುಬೈಗೆ ತೆರಳಿದ್ದರು. ಶನಿವಾರ ರಾತ್ರಿ ಯುದ್ಧ ನಡೆದ ಸಂದರ್ಭದಲ್ಲಿ ಇವರು ವಾಸವಿದ್ದ, ಮನೆಯ ಹಿಂಭಾಗವೇ ಶೆಲ್ ದಾಳಿ ನಡೆದಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು, ಈ ಕುಟುಂಬಕ್ಕೆ ದುಬೈನಲ್ಲಿರುವ ಮಮತ ಎಂಬ ಕನ್ನಡಿಗರ ಕುಟುಂಬವೊಂದು ಆಶ್ರಯ ನೀಡಿದ್ದು, ಆದಷ್ಟು ಬೇಗ ತಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳವಂತೆ ಅವರು ಮನವಿ ಮಾಡಿದ್ದಾರೆ.
ಬೇಲೂರು ತಾಲೂಕಿನ, ಅಂಗಡಿಹಳ್ಳಿಯ ಪಂಜು, ಜಮುನ, ಸುರೇಂದ್ರ ಪ್ರಸಾದ್, ರತೀಶ್ ಹಾಗೂ ಮೈಸೂರು ಮೂಲದ ನೇತ್ರಾವತಿ ತಾವಿರುವ ಕಟ್ಟಡದ ಪಕ್ಕದಲ್ಲೇ ಬಾಂಬ್ ಸಿಡಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ವತಃ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಕೆಲ ಮಂದಿಯ ಸಂಬಂಧಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
