ಚಿಕ್ಕಮಗಳೂರು: ಜೀವ ವೈವಿಧ್ಯ ಪರಿಸರ ಹೊಂದಿರುವ ಪ್ರದೇಶದಲ್ಲಿ ಕೃತಕ ಅರಣ್ಯ ಸೃಷ್ಟಿಗೆ ಮುಂದಾಗಿರುವ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಇದು ಕೊಪ್ಪ ತಾಲೂಕಿನ ಹುಲ್ತಾಳು ಗ್ರಾಮ ಕಾಡು ಮತ್ತು ಬೋಳುಗುಡ್ಡ ಹೊಂದಿರುವ ವೈವಿಧ್ಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ವಿರುದ್ಧ ಗಿರಿಜನರ ಪ್ರತಿಭಟನೆ ನಡೆದಿದೆ.
ಈ ಪರಿಸರಕ್ಕೆ ಹೊಂದಿಕೊಂಡು ಅನೇಕ ಗಿರಿಜನರು ವಾಸಿಸುತ್ತಿದ್ದು, ಇದೀಗ ಅರಣ್ಯ ಇಲಾಖೆ ಇರುವ ಕೆಲ ಮರ /ಗಿಡಗಳನ್ನು ಕತ್ತರಿಸಿ ಹೊಸದಾಗಿ ಗಿಡ ನೆಡಲು ಮುಂದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜೆಸಿಬಿಗಳನ್ನು ತಂದು ಹೊಸದಾಗಿ ಗಿಡ ನೆಡಲು ಬಂದಿದ್ದ ಅರಣ್ಯ ಸಿಬ್ಬಂದಿಯನ್ನು ತಡೆದಿರುವ ಸ್ಥಳೀಯರು ಇರುವ ಕಾಡು ಪರಿಸರವನ್ನು ರಕ್ಷಿಸಿದರೆ ಸಾಕು, ಕೃತಕ ಕಾಡು ನಿರ್ಮಿಸುವ ಅಗತ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಒಂದು ಹಂತದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಅರಣ್ಯ ಅಧಿಕಾರಿಗಳು ನೀಡಿದ್ದಾರೆ.
ಗಿರಿಜನರ ಮೇಲೆ ದಬ್ಬಾಳಿಕೆ ನಡೆಸುವ ಯತ್ನ ವನ್ನು ಅರಣ್ಯ ಸಿಬ್ಬಂದಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
