ಕುಂದಾಪುರ: ಪಟಾಕಿ ಅಂಗಡಿಗೆ ಭೀಕರ ಬೆಂಕಿ ಹೊತ್ತಿಕೊಂಡು, ಅಂಗಡಿಯೊಂದಿಗೆ ಇಡೀ ಕಟ್ಟಡವೇ ಉರಿದ ಘಟನೆ ಕುಂದಾಪುರ ವೆಂಕಟರಮಣ ದೇವಸ್ಥಾನದ ಸಮೀಪ ನಡೆದಿದೆ.
ಭಾನುವಾರ ತಡರಾತ್ರಿ ಸುಮಾರು 3 ಗಂಟೆ ವೇಳೆಗೆ ಜಗಧೀಶ್ ಭಟ್ ಎಂಬವರ ಪುಸ್ತಕದ ಮಳಿಗೆ ಮತ್ತು ಪಟಾಕಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಫೋಟಕ ವಸ್ತುಗಳಿದ್ದ ಕಾರಣ ಅಗ್ನಿಯ ಕೆನ್ನಾಲಗೆ ಎಲ್ಲೆಡೆ ಪಸರಿಸಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿತು. ಪಕ್ಕದ ಮತ್ತೆರಡು ಅಂಗಡಗಳಿಗೂ ಘಟನೆಯಿಂದ ಹಾನಿ ಸಂಭವಿಸಿದೆ.ಬೆಂಕಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲು ಹಲವು ಹೊತ್ತು ಬೇಕಾಯಿತು.ನಿರಂತರ ಸ್ಫೋಟಗಳ ಶಬ್ದದಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಬೆಂಕಿಯ ಕಾರಣ ಮತ್ತು ನಷ್ಟದ ವಿವರಗಳನ್ನು ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ಪರಿಶೀಲಿಸುತ್ತಿವೆ.
