ಮೂಡಿಗೆರೆ: ತಾಲೂಕಿನ ಲೋಕವಳ್ಳಿ ಸಮೀಪದ ಊರುಮುಂದಿನ ಕರೆ ಪ್ರದೇಶದಲ್ಲಿ ನಡೆದಿರುವ ಅಕ್ರಮ ಒತ್ತುವರಿಯನ್ನು ಗುರುತಿಸಿ ತೆರವುಗೊಳಿಸುವ ಉದ್ದೇಶದಿಂದ ಮಂಗಳವಾರ ಅಧಿಕಾರಿಗಳು ಜಿಪಿಎಸ್ ಮೂಲಕ ಭೂಮಾಪನ ಕಾರ್ಯ ನಡೆಸಿದರು.
ಒತ್ತುವರಿ ಬಿಡಿಸುವ ಸಂಬಂಧಿತ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆರೆಯ ಮೂಲ ಗಡಿ ಗುರುತುಗಳನ್ನು ಪತ್ತೆಹಚ್ಚುವ ಕೆಲಸ ಕೈಗೊಂಡರು. ಆಗ ಸುಮಾರು 3 ಎಕರೆ ಪ್ರದೇಶ ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂತು. ಅಲ್ಲದೇ ಸಣ್ಣ ನೀರಾವರಿ ಇಲಾಖೆಯಿಂದ ಪರವಾನಗಿ ಪಡೆಯದೇ ಕೆರೆಯೊಳಗೆ ಜೆಜೆಎಂ ಕಾಮಗಾರಿಗಾಗಿ ಅಕ್ರಮವಾಗಿ ಬಾವಿ ನಿರ್ಮಿಸಿರುವುದು ಕಂಡು ಬಂದಿತು.
ಈ ಸಂದರ್ಭದಲ್ಲಿ ಕಸಬಾ ಆರ್ಐ ಚಂದ್ರಶೇಖರ್ ಸುದ್ದಿಗಾರರ ಜೊತೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆರೆ ಸುತ್ತಮುತ್ತ ಒತ್ತುವರಿ ನಡೆದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜಿಪಿಎಸ್ ತಂತ್ರಜ್ಞಾನದ ಸಹಾಯದಿಂದ ಕೆರೆಯ ನಿಖರ ವ್ಯಾಪ್ತಿಯನ್ನು ಗುರುತಿಸಿ, ಸರಕಾರಿ ದಾಖಲೆಗಳೊಂದಿಗೆ ಹೋಲಿಕೆ ಮಾಡಲಾಗುವುದು. ನಂತರ ಭೂಮಾಪನ ವರದಿ ಸಿದ್ಧವಾದ ಬಳಿಕ ಒತ್ತುವರಿ ದೃಢಪಟ್ಟ ಅಕ್ಕಪಕ್ಕದ ಮಾಲೀಕರಿಗೆ ನೋಟೀಸು ನೀಡಿ, ಕಾನೂನು ಪ್ರಕಾರ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.
ಕಾರ್ಯಚರಣೆಯಲ್ಲಿ ಗ್ರಾಮ ಆಡಳಿತಾಧಿಕಾರಿ ನರೇಂದ್ರ ಬಾಬು, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮಂಜುಳ, ಸರ್ವೆ ಅಧಿಕಾರಿ ದೀಪಕ್ ಇದ್ದರು.
