ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾವಳಿಗೆ ಬೇಸತ್ತು ಗ್ರಾಮಸ್ಥರು ಹಾಗೆ ಇದನ್ನು ತಡೆಯಲು ಪೊಲೀಸ್ ಇಲಾಖೆಯೂ ಸಾಧ್ಯವಾಗದ ಕಾರಣ ಗ್ರಾಮ ದೇವತೆ ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ.
ಗ್ರಾಮದ ಹಲವು ಅಂಗಡಿಗಳಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟವಾಗುತ್ತಿದೆ. ಇದರಿಂದ ಯುವ ಪೀಳಿಗೆ ಕೆಲಸ ಕಾರ್ಯ ಬಿಟ್ಟು ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಖಾಕಿಗಳಿಂದ ಆಗದ ಕೆಲಸವನ್ನು ನೀವೇ ಮಾಡಿ ತಾಯಿ ಎಂದು ಗ್ರಾಮದ ಎಲ್ಲರು ಒಟ್ಟಾಗಿ ಗ್ರಾಮ ದೇವತೆ ಚಾಮುಂಡೇಶ್ವರಿ ದೇವಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ. ನಮ್ಮ ಗ್ರಾಮದ ಅಂಗಡಿಯವರು ಮಧ್ಯ ಮಾರಾಟ ಮಾಡಬಾರದು ಮತ್ತು ನಮ್ಮ ಗ್ರಾಮದ ಯುವಕರು ಅದನ್ನು ಖರೀದಿಸಿ ಕುಡಿಯಬಾರದು ಯಾರು ಅಕ್ರಮವಾಗಿ ಮಧ್ಯ ಮಾರಾಟ ಮಾಡಿ ನಮ್ಮ ಯುವಕರಿಗೆ ಕುಡಿಸುತ್ತಿದ್ದಾರೆ ಅವರನ್ನು ನೀನೇ ನೋಡಿಕೋ ತಾಯಿ ಎಂದು ಗ್ರಾಮಸ್ಥರು ಭಕ್ತಿಯಿಂದ ಬೇಡಿಕೊಂಡಿದ್ದಾರೆ.
ಈ ವೇಳೆ ಗ್ರಾಮಸ್ಥರಾದ ಪರಮೇಶ್, ಅಶ್ವಥ್, ಜಯಂತ್, ಶೋಧನ್, ಪ್ರಸನ್ನ, ಜೈಕುಮಾರ್, ಕಾರ್ತಿಕ್, ಧರ್ಮೇಶ್ ಸೇರಿದಂತೆ ಹಲವರು ಇದ್ದರು.
ಹಾಗೆ ಅಕ್ರಮ ಮಧ್ಯ ಮಾರಾಟ ಹಾವಳಿಯಿಂದ ತತ್ತರಿಸಿರುವ ಹೊಸಕೆರೆ ಗ್ರಾಮಸ್ಥರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎಂದರೆ ತಪ್ಪಾಗಲಾರದು.
