ಮೂಡಿಗೆರೆ: ಮಹಿಳೆಯರು ಸಮಾನತೆ, ಗೌರವ ಮತ್ತು ಸ್ವಾಭಿಮಾನದಿಂದ ಬದುಕಲು ಕಾನೂನು ಪ್ರಜ್ಞೆ ಅಗತ್ಯ” ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೌರವಾನ್ವಿತ ಶ್ರೀಮತಿ ಸುರಕ್ಷಾ ಕೆ.ಕೆ. ಹೇಳಿದರು.
ವಿಮುಕ್ತಿ ಚಾರಿಟೇಬಲ್ ಟ್ರಸ್ಟ್, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಅಭಿಯೋಜನ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆಯ ಚರ್ಚ್ ಸಭಾಭವನದಲ್ಲಿ ‘ಮುಕ್ತ ಕಾನೂನು ಜಾಗೃತಿ ಕಾರ್ಯಕ್ರಮ’ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀ ವಿಶ್ವನಾಥ ಎ. ಅವರು “ಮಹಿಳೆಯರು ಧೈರ್ಯದಿಂದ ಬದುಕಿ ನ್ಯಾಯಯುತ ಜೀವನಕ್ಕಾಗಿ ಕಾನೂನು ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯಾದೀಶೆ ಸುರಕ್ಷಾ ಕೆ. ಅವರು ಮಾತನಾಡಿ ಮಹಿಳೆಯರು ಅಜ್ಞಾನದಿಂದ ಹೊರಬಂದು ಕಾನೂನು ಸೇರಿದಂತೆ ಎಲ್ಲಾ ವಿಭಾಗಗಳ ಜ್ಞಾನವನ್ನು ಅರಿತುಕೊಳ್ಳಬೇಕು. ಸ್ವಯಂ ಜಾಗೃತಿಯು ಮಹಿಳೆಯ ಶಕ್ತಿ ಮತ್ತು ಗೌರವವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ. ಅರುಣ್ ಲೋಬೊ ಅವರು ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳ ಅರಿವು ಬೆಳೆಸಿ ಧೈರ್ಯದಿಂದ ಮುಂದೆ ಬರಬೇಕುಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆ. ದೇವರಾಜ್, ವಕೀಲರಾದ ಭಾಗ್ಯ ಜೆ.ಎನ್. ರಾಘು ಹಂಡಗುಳಿ ಸೇರಿದಂತೆ ಅನೇಕರು ಇದ್ದರು
ಕಾರ್ಯಕ್ರಮವನ್ನು ಬಣಕಲ್ ವಿಂಧ್ಯಾ ಸ್ವಾಗತಿಸಿ, ಗೀತಾ ವಂದನಾರ್ಪಣೆ ಸಲ್ಲಿಸಿದರು ನವೀನ್ ಕುಮಾರ್ ನಿರೂಪಣೆ ಮಾಡಿದರು.
