ಮೂಡಿಗೆರೆ: ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಣಿಬೈಲ್ ಎಂಬ ಗ್ರಾಮದ ಜನರು ಸ್ಮಶಾಣಕ್ಕೆ ಹೋಗಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರ ಬಗ್ಗೆ ಪಬ್ಲಿಕ್ ಇಂಪ್ಯಾಕ್ಟ್ ಈ ಬಗ್ಗೆ ವಿಸ್ತೃತ ವರದಿ ಮಾಡಲಾಗಿತ್ತು.
ಹೌದು.. ಗುಣಿಬೈಲ್ ಎಂಬ ಗ್ರಾಮದ ಜನರ ಪರಿಸ್ಥಿತಿ ಅರಿತು ಹಾಗೆ ಜನರು ಈ ರೀತಿ ಸಮಸ್ಯೆ ಅನುಭವಿಸ್ತಾ ಇರೋದನ್ನ ಗಮನಿಸಿ ಅಲ್ಲಿನ ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ ನಾವು ಮಾಡಿದ್ದ ವರದಿಯನ್ನೇ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮನವರು ಇದನ್ನ ಫೇಕ್ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಅಲ್ಲಿನ ಜನ ಒದ್ದಾಡುತ್ತಿರುವುದು ನಿಮ್ಮ ಪ್ರಕಾರ ಸುಳ್ಳಾ, ಅಲ್ಲಿನ ಗ್ರಾಮಸ್ಥರು ತಮ್ಮ ಗೋಳನ್ನು ತೋಡಿಕೊಂಡಿದ್ದು ಸುಳ್ಳಾ ನೀವು ಆ ಜಾಗಕ್ಕೆ ಹೋಗಿ ನೋಡಿದ್ದೀರಾ ಹೇಗೆ ಫೇಕ್ ಎಂದು ನಂಬಿ ಈ ಪೋಸ್ಟನ್ನು ಹಾಕಿದ್ದೀರಾ ? ಜನಪ್ರತಿನಿಧಿಗಳು ಜನರ ಸಮಸ್ಯೆಯನ್ನು ಆಲಿಸಬೇಕು ವಿನಾ ಯಾರೋ ಮಾತನ್ನು ಕೇಳಿ ಸುಳ್ಳು ಎಂದು ಪರಿಗಣಿಸುವುದಲ್ಲ. ಅದಕ್ಕಾಗಿ ಒಂದು ಮಾಧ್ಯಮದ ಮೇಲೆಯೇ ತಮ್ಮ ದರ್ಪವನ್ನು ತೋರಿಸಬಾರದು .. ಪ್ರತ್ಯಕ್ಷ ಕಂಡರು ಪ್ರಮಾಣಿಸಬೇಕು ಎಂದು ಹೇಳುವುದು ಇದಕ್ಕೆ.

ಹಾಗಾದರೆ ಈ ಗ್ರಾಮದ ಜನರ ಪರಿಸ್ಥಿತಿ ಒದ್ದಾಟ ನಿಮಗೆ ಕಾಣಿಸಲಿಲ್ವಾ ಹಾಗೆ ಈ ಜಾಗವನ್ನು ತಾವೇ ಗುಳುಂ ಮಾಡಲು ಹೀಗೆ ಸ್ಕೆಚ್ ಹಾಕಿದ್ರಾ ಮೇಡಂ ಎಂದು ನಾವಿಲ್ಲಿ ಕೇಳಬೇಕಾಗುತ್ತದೆ. ಸಾರ್ವಜನಿಕರು ನಮಗೆ ಸಮಸ್ಯೆ ಆಗ್ತಿದೆ ಅಂತಾ ಕೇಳಿಕೊಂಡಾಗ, ಅವರ ಪರವಾಗಿ ಧ್ವನಿ ಎತ್ತುವ ಕೆಲಸವನ್ನಷ್ಟೇ ಪಬ್ಲಿಕ್ ಇಂಪ್ಯಾಕ್ಟ್ ಮಾಡಿಕೊಂಡು ಬರುತ್ತಿದೆ. ಮೊನ್ನೆಯ ಗುಣಿಬೈಲ್ ಸುದ್ದಿಯೂ ಅಷ್ಟೇ.. ಗುಣಿಬೈಲ್ ಗ್ರಾಮಸ್ಥರ ಕೋರಿಕೆ ಮೇರೆಗೆ ನಮ್ಮ ವರದಿಗಾರರು ಹೋಗಿ ಸುದ್ದಿ ಮಾಡಿದ್ದಾರೆ. ನಮ್ಮ ಸ್ಮಶಾನಕ್ಕೆ ದಾರಿ ಇಲ್ಲ, ಸ್ಮಶಾನದಲ್ಲಿ ಗಿಡಗಂಟೆಗಳು ಬೆಳೆದಿದ್ದು ಶವ ಹೂಳಲು ತೊಂದರೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ನಿಮ್ಮನ್ನ ಜನಪ್ರತಿನಿಧಿ ಅಂತಾ ಜನರು ‘ಅಂದುಕೊಂಡಿರುವುದರಿಂದ’, ಸ್ಮಶಾನಕ್ಕೆ ದಾರಿ ಮಾಡಿಸಿ ಕೊಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ. ಈ ಸುದ್ದಿಯನ್ನ ಪಬ್ಲಿಕ್ ಇಂಪ್ಯಾಕ್ಟ್, ಒಂದು ಜನಪರ ಮಾಧ್ಯಮವಾಗಿ ನಿಮ್ಮ ಮುಂದಿಡುವ ಕೆಲಸವನ್ನಷ್ಟೇ ಮಾಡಿದೆ. ಇಲ್ಲಿ ನಿಮ್ಮನ್ನ ದೂಷಿಸುವ, ಟೀಕಿಸುವ ಕೆಲಸವನ್ನ ಮಾಡಿಲ್ಲ, ಬದಲಾಗಿ ಜನರು ಈ ರೀತಿ ಸಮಸ್ಯೆ ಅನುಭವಿಸ್ತಾ ಇದ್ದಾರೆ.. ಆ ಸಮಸ್ಯೆ ಪರಿಹರಿಸುವಂತೆ ನಿಮ್ಮನ್ನ ಮನವಿ ಮಾಡಿಕೊಂಡಿದ್ದಾರೆ ಅನ್ನೋದನ್ನ ಬಿತ್ತರಿಸಿದೆ.
ಆ ಸ್ಮಶಾನವನ್ನ ಜನರು ನಿನ್ನೆ ಮೊನ್ನೆಯಿಂದಲ್ಲ, ಹತ್ತಿಪ್ಪತ್ತು ವರ್ಷಗಳಿಂದ ಅಲ್ಲ. ಅದೆಷ್ಟೋ ದಶಕಗಳ ಹಿಂದಿನಿಂದಲೂ ಬಳಸುತ್ತಿದ್ದಾರೆ. ದಾಖಲೆಯಲ್ಲಿ ‘ಸರ್ಕಾರಿ ಗೋಮಾಳ’ ಅಂತಾ ಬಂದ್ರೆ, ಆ ಜಾಗ ‘ಸ್ಮಶಾನ’ ಅಲ್ಲ ಅಂತಾ ಹೇಗೆ ಹೇಳ್ತೀರಾ..?ನೀವು-ನಾವು ಹುಟ್ಟೋಕ್ಕಿಂತ ಮುಂಚೆ ಅದೆಷ್ಟೋ ಮಂದಿ ಆ ಜಾಗದಲ್ಲಿ ಮಣ್ಣಾಗಿದ್ದಾರೆ. ಅಂದಿನಿಂದಲೂ ಇತ್ತೀಚಿನ ತನಕ ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡಿರುವ ಅದೆಷ್ಟೋ ಜನರು, ಆ ಮಣ್ಣಿನೊಂದಿಗೆ ಭಾವನಾತ್ಮಕ ಬೆಸುಗೆ ಹೊಂದಿದ್ದಾರೆ.
ಆ ವೀಡಿಯೋದಲ್ಲಿ ಮಾತನಾಡಿರೋ ವಾಯುಸೇನೆಯಲ್ಲಿ ಕೆಲಸ ಮಾಡ್ತಿರೋ ನಮ್ಮ ಹೆಮ್ಮೆಯ ಯೋಧ ಪುನೀತ್ ಅನ್ನೋರು, ತನ್ನ ತಂದೆಯನ್ನ ಕಳೆದುಕೊಂಡಾಗ ಅಂತ್ಯ ಸಂಸ್ಕಾರ ಮಾಡಲು ಅದೆಷ್ಟು ಕಷ್ಟಪಟ್ಟೆ ಅನ್ನೋದನ್ನ ಎಳೆಎಳೆಯಾಗಿ ಹೇಳಿಕೊಂಡಿದ್ದಾರೆ. ಅಲ್ಲಿನ ಜನರ ಪರಿಸ್ಥಿತಿ ಕೇಳಿದ್ರೆ ನಮ್ಮ ಕಣ್ಣಲ್ಲೇ ‘ನೀರು’ ಬರುತ್ತೆ.. ಇನ್ನೂ ನೀವೊಬ್ಬರು ಮಹಿಳಾ ಜನಪ್ರತಿನಿಧಿ ಆಗಿ ನಿಮ್ಮ ‘ಹೆಂಗರುಳು’ ಹೆಚ್ಚಿನದಾಗಿಯೇ ಮಿಡಿಯಬೇಕಿತ್ತು. ಆಕ್ಚುವಲಿ, ಇಲ್ಲಿ ನಿಮ್ಮ “ವುಮೆನ್ ಕಾರ್ಡ್” ವರ್ಕ್ ಆಗಬೇಕಿತ್ತು. ಹೌದು, ಜನರು ತೊಂದರೆಯಲ್ಲಿದ್ದಾರೆ ನನಗೊಂದು ಅವಕಾಶ ಸಿಕ್ಕಿದೆ. ಜನರ ಸೇವೆ ಮಾಡೋಣ ಅಂತಾ ಮುಂದಾಗಬೇಕಿತ್ತು..
ಅದನ್ನ ಬಿಟ್ಟು, ಆ ಜಾಗವೇ ಫೇಕ್ ಅನ್ನೋ ಮೂಲಕ, ಜನರನ್ನ ಅವಮಾನಿಸಿದ್ದೀರಿ.. ಜನರ ಭಾವನೆಗಳನ್ನ ಹೀಗೆಳೆದಿದ್ದೀರಿ .! ಆ ಜನರು ಹೇಳಿದ್ದೇ ‘ಫೇಕ್’ ಅಂದಿದ್ದೀರಿ.! ದಾಖಲೆ ಆಗಿಲ್ಲ ಅಂದ್ರೆ ನೀವು ಜನಪ್ರತಿನಿಧಿ ಇದ್ದೀರಿ, ದಾಖಲೆ ಮಾಡಿಸಿಕೊಡಿ.! ನಿಮ್ಮ ಗಮನದಲ್ಲಿರಲಿ, ಎಲ್ಲಾ ಸ್ಮಶಾನಗಳು, ಸರ್ಕಾರಿ ಜಾಗದಿಂದಲೇ ಆಗಿರೋದು. ಸರ್ಕಾರಿ ಗೋಮಾಳ ಇರೋದನ್ನ ‘ಸ್ಮಶಾನ’ ಮಾಡೋದು ಚಿಟಿಕೆ ಹೊಡೆಯುವ ಕೆಲಸ. ಅದನ್ನ ಬಿಟ್ಟು, ಅದು ‘ಫೇಕ್’, ಇದು ‘ಫ್ಯಾಕ್ಟ್’ ಅಂತಾ ಸಬೂಬು ಕೊಡೋದಕ್ಕೆ ಅಲ್ಲ ನಿಮ್ಮನ್ನ ಆಯ್ಕೆ ಮಾಡಿರೋದು.
ಪಬ್ಲಿಕ್ ಇಂಪ್ಯಾಕ್ಟ್ ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿ ಮಾತನಾಡಿದ ಗುಣಿಬೈಲ್ ಗ್ರಾಮದ ಪುನೀತ್ ಕಳೆದ ನವೆಂಬರ್ ನಲ್ಲಿ ರಸ್ತೆ ಅಪಘಾತದಲ್ಲಿ ನನ್ನ ತಂದೆ ತೀರಿಹೋಗಿದ್ದು ಅವರ ಪಾರ್ಥಿವ ಶರೀರವನ್ನು ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲು ಸ್ಮಶಾಣಕ್ಕೆ ಸೂಕ್ತ ದಾರಿ ವ್ಯವಸ್ಥೆ ಇಲ್ಲದೆ ಪರದಾಡಿದ ಪ್ರಸಂಗವನ್ನು ಹಂಚಿಕೊಂಡರು. ನೋವು ಅನುಭವಿಸಿದವರಿಗೆ ಮಾತ್ರ ನೋವಿನ ಬೆಲೆ ಅರ್ಥ ಆಗುತ್ತದೆ ಎಂದು ತಮ್ಮ ನೋವನ್ನು ತೋಡಿಕೊಂಡರು.
