ಕೊಟ್ಟಿಗೆಹಾರ: ನ್ಯಾಯಾಂಗ ಸೇವಾ ನೇಮಕಾತಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಮೂಡಿಗೆರೆ ತಾಲ್ಲೂಕಿನ ಬಿಳುಗುಳ ಗ್ರಾಮದ ನಿತಿನ್ ಕುವೆಲ್ಲೊ ಅವರು ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ರಾಜ್ಯದಲ್ಲಿ ಒಟ್ಟು 83 ಮಂದಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಗೊಂಡಿದ್ದು, ಅವರಲ್ಲಿ ನಿತಿನ್ ಕುವೆಲ್ಲೊ ಕೂಡ ಸ್ಥಾನ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯಾಗಿ ಬೆಳೆದ ಅವರು ಸಾಧಿಸಿರುವ ಈ ಯಶಸ್ಸು ತಾಲ್ಲೂಕಿಗೆ ಕೀರ್ತಿಯಾಗಿದೆ.

ಮೂಡಿಗೆರೆಯ ಸಂತ ಮಾರ್ಥಾಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಿತಿನ್ ಅವರು ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. 2021ರಿಂದ ಮೂಡಿಗೆರೆಯ ನ್ಯಾಯಾಲಯದಲ್ಲಿ ಹಿರಿಯ ವಕೀಲ ಡಿ.ಎಸ್. ಸುಧೀರ್ ಅವರೊಂದಿಗೆ ಸಹಾಯಕ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು.
ಬಿಳುಗುಳ ಗ್ರಾಮದ ಲಿಯೋ ಕುವೆಲ್ಲೊ ಹಾಗೂ ಅನಿತ ಕುವೆಲ್ಲೊ ದಂಪತಿಯ ಪುತ್ರರಾದ ನಿತಿನ್ ಅವರ ಸಾಧನೆಗೆ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ ಅವರು ಅವರ ನಿವಾಸಕ್ಕೆ ಭೇಟಿ ನೀಡಿ ನಿಗಮದ ವತಿಯಿಂದ ಅಭಿನಂದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದ ಅಧ್ಯಕ್ಷ ಪೆಡ್ಡಿ ಲೋಬೊ, ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಹಾಗೆ ನಿತಿನ್ ಕುವೆಲ್ಲೊ ಅವರ ಈ ಸಾಧನೆ ಯುವಜನತೆಗೆ ಮಾದರಿಯಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
