ಮೂಡಿಗೆರೆ : ರಾಜ್ಯದಲ್ಲಿ ಪ್ರಮುಖ ಕಾಫಿ ಬೆಳೆಯುವ ಜಿಲ್ಲೆ ಚಿಕ್ಕಮಗಳೂರು ಜಿಲ್ಲೆಯಾಗಿದ್ದು, ಈ ಬಾರಿ ಕಾಫಿಗೆ ಉತ್ತಮ ಬೆಲೆ ಇರುವುದರಿಂದ ಕಳ್ಳತನಗಳು ಅಧಿಕವಾಗಿ ನಡೆಯುತ್ತಿದ್ದು ಬೆಳೆಗಾರರ ಆತಂಕ ಹೆಚ್ಚಾಗಿದೆ.
ಕಳ್ಳರ ಹಾವಳಿ ಮಿತಿ ಮೀರಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗಿನ ಜಿಲ್ಲಾ ಪೊಲೀಸರು ತಂದಿರುವ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿ ಬೆಳೆಗಾರರನು ಆತಂಕದಿಂದ ಪಾರು ಮಾಡುವಂತೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಮೂಡಿಗೆರೆ ತಾಲ್ಲೂಕಿನಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದ್ದು ಅದರಲ್ಲೂ ತೋಟದಲ್ಲಿ ಕೂಲಿ ಮಾಡುವ ಕೆಲವು ಕಾರ್ಮಿಕರು ಕಾಫಿ ಕಳ್ಳತನದಂತ ಕೃತ್ಯದಲ್ಲಿ ಭಾಗಿಯಾಗಿದ್ದು ಇದು ಬಹಳ ಆತಂಕವನ್ನು ಉಂಟುಮಾಡಿದೆ ಎಂದರು.
ಗೋಣಿಬೀಡು ಹೋಬಳಿಯ ಕಸ್ಕೆಬೈಲು ಗ್ರಾಮದ ನಿವೃತ್ತ ಕಮರ್ಷಿಯಲ್ ಟ್ಯಾಕ್ಸ್ ಆಫಿಸರ್ ರಂಗಸ್ವಾಮಿ ಅವರ ಮನೆಯಲ್ಲಿ ಅವರ ತೋಟದಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಕಳೆದ ಮೂರು ತಿಂಗಳಿನಿಂದ ರಾತ್ರಿ ಗುಂಪು ಕಟ್ಟಿಕೊಂಡು ಬಂದು ಹಲವು ಬಾರಿ ಕಾಫಿ ಬೀಜಗಳನ್ನು ಕಳ್ಳತನ ಮಾಡಿ ಅದನ್ನು ಪಕ್ಕದ ಜಿಲ್ಲೆಯ ವ್ಯಾಪಾರಿಯೋರ್ವರಿಗೆ ಮಾರಾಟ ಮಾಡಿದ್ದು. ಕಾಫಿ ಕಳುವಿನ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು. ಗೋಣಿಬೀಡು ಪೊಲೀಸರಿಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಮೂಡಿಗೆರೆ ವೃತ್ತ ನಿರೀಕ್ಷಕ ರಾಜಶೇಖರ್ ಅವರ ಮಾರ್ಗದರ್ಶನದಲ್ಲಿ ಗೊಣಿಬೀಡು ಠಾಣಾಧಿಕಾರಿ ಹರ್ಷವರ್ಧನ್ ಹಾಗೂ ಸಿಬ್ಬಂದಿಗಳು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊಡಗಿನಲ್ಲಿ ಈಗಾಗಲೇ ಅಲ್ಲಿಯ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಕೆ.ರಾಮರಾಜನ್ ಅವರು, ಕಾಫಿ ಮತ್ತು ಕಾಳು ಮೆಣಸು ಖರೀದಿ ಮಾಡುವ ವ್ಯಾಪಾರಸ್ಥರು ಮಾರಾಟಗಾರ ಸಂಪೂರ್ಣ ಮಾಹಿತಿ ಅವರ ವಿಳಾಸ, ಮೊಬೈಲ್ ಸಂಖ್ಯೆ , ವಹಿವಾಟಿನ ವಿವರಗಳು, ತೂಕ ಮತ್ತು ಮೊತ್ತವನ್ನು ಕಡ್ಡಾಯವಾಗಿ ದಾಖಲಿಸುವಂತೆ ಮತ್ತು ಬೆಳೆ ಖರೀದಿಸುವ ವ್ಯಕ್ತಿಗಳ ಮೇಲೆ ಸಂಶಯ ಬಂದಲ್ಲಿ ಅವರ ಭಾವಚಿತ್ರವನ್ನು ತೆಗೆದುಕೊಳ್ಳುವಂತೆ ಹಾಗೂ ಮಾರಾಟಗಾರರ ಹಿನ್ನಲೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ವ್ಯವಹರಿಸುವಂತೆ ಎಚ್ಚರಿಕೆಯನ್ನ ನೀಡಿದ್ದು. ಅದೇ ಕಾನೂನನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಜಾರಿಗೆ ತರುವಂತೆ ಮತ್ತು ಬೆಳೆಗಾರರ ಕುಂದು ಕೊರತೆ ಬಗ್ಗೆ ಸಭೆ ನಡೆಸುವಂತೆ ಒತ್ತಾಯಿಸಿದ್ದಾರೆ. ಹಾಗೆಯೇ ಮನೆಮನೆಗೆ ಪೊಲೀಸ್ ಬೀಟ್ ಹೆಚ್ಚಿಸುವಂತೆ ಮನವಿ ಮಾಡಿದರು.
ಮಲೆನಾಡಿನಲ್ಲಿ ಬಹುತೇಕವಾಗಿ ಕಾಫಿ ತೋಟಗಳಲ್ಲಿ ವೃದ್ದರು ಹೆಚ್ಚಾಗಿ ವಾಸಿಸುತ್ತಿದ್ದಾರೆ ಮಕ್ಕಳು ಹೊರ ಜಿಲ್ಲೆ, ಹೊರ ರಾಜ್ಯ ಹೊರದೇಶಗಳಲ್ಲಿದ್ದು ಅವರ ರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಮಧ್ಯ ರಾತ್ರಿಯ ಸಮಯದಲ್ಲಿ ಪೊಲೀಸ್ ವಾಹನಗಳು ಓಡಾಟ ನಡೆಸಿದಲ್ಲಿ ಕಳ್ಳರಿಗೆ ಭಯವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಆಫಿಸರ್ ರಂಗಸ್ವಾಮಿ, ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಿ.ಎಸ್.ರಮೇಶ್, ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್, ಆದರ್ಶ, ವಿ.ಕೆ.ಶಿವೇಗೌಡ ಸೇರಿದಂತೆ ಅನೇಕ ಬೆಳೆಗಾರರು ಉಪಸ್ಥಿತರಿದ್ದು ಕಳ್ಳತನ ಮಾಡಿದ್ದ ಕಮರ್ಷಿಯಲ್ ಟ್ಯಾಕ್ಸ್ ಆಫಿಸರ್ ರಂಗಸ್ವಾಮಿ ಅವರಿಗೆ ಸಮಧಾನ ತಿಳಿಸಿ ಈಗಾಗಲೇ ಕೆಲವರನ್ನು ಪೊಲೀಸರು ಬಂಧಿಸಿ ತನಿಖೇ ನಡೆಸುತ್ತಿದ್ದು ನಿಮ್ಮೊಂದಿಗೆ ಬೆಳೆಗಾರರ ಸಂಘ ಇದೆ ಎಂದು ಧೈರ್ಯ ತುಂಬಿದರು.
