ಮೂಡಿಗೆರೆ : ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು ಕೊಟ್ಟಿಗೆಹಾರ ಗ್ರಾಮದ ರೈತ ರಿಚರ್ಡ್ ಲೋಬೊ ಅವರ ತೋಟವನ್ನು ನುಜ್ಜುಗುಜ್ಜು ಮಾಡಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಹಗಲು-ರಾತ್ರಿ ಎನ್ನದೆ ಆನೆಗಳು ಉಪಟಳ ನಡೆಸುತ್ತಿವೆ. ತೋಟದಲ್ಲಿದ್ದ ಅಡಿಕೆ, ಕಾಫಿ ಹಾಗೂ ಏಲಕ್ಕಿ ಗಿಡಗಳನ್ನು ಪುಡಿ ಮಾಡಿದ್ದು, ಅಪಾರ ಮೌಲ್ಯದ ಬೆಳೆ ನಾಶವಾಗಿದೆ.
ರೈತರು ವರ್ಷಪೂರ್ತಿ ಶ್ರಮಿಸಿ ಬೆಳೆ ಬೆಳೆದ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನೆ ದಾಳಿಯಿಂದ ಹಲವಾರು ಗಿಡಗಳು ನೆಲಸಮವಾಗಿದ್ದು, ತೋಟದ ಭಾಗಶಃ ಬೇಲಿ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯರು ಹಾಗೂ ರೈತರು ಕಾಡಾನೆಗಳ ಅಟ್ಟಹಾಸದಿಂದ ಭಯಭೀತರಾಗಿದ್ದು, ರಾತ್ರಿ ನಿದ್ರೆ ಕಳೆದುಕೊಂಡಿದ್ದಾರೆ.
ಈ ಕೂಡಲೇ ಅರಣ್ಯ ಇಲಾಖೆಯು ಕ್ರಮ ಕೈಗೊಂಡು ಕಾಡಾನೆ ತೊಲಗಿಸಲು ಮತ್ತು ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
