ಎನ್ ಆರ್ ಪುರ: ಮಲೆನಾಡಿನಲ್ಲಿ ಇಷ್ಟು ದಿನ ಆನೆ ಹಾಗೂ ಕಾಡುಕೋಣಗಳ ದಾಳಿ ಹೆಚ್ಚಾಗಿದ್ದವು, ಆದರೇ ಈಗ ಕಾಡುಹಂದಿಗಳ ದಾಳಿಗೆ ರೈತರು ಬೆಳೆದಿರುವ ಬೆಳೆಗಳು ನಷ್ಟ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಮುತ್ತಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ. ಕಣಬೂರು ಗ್ರಾಮದಲ್ಲಿ ನಡೆದಿದೆ.
ಕಾಡುಹಂದಿಗಳಿಂದ ಬೆಳೆ ನಷ್ಟವಾಗಿರುವ ರೈತ ನಾಗೇಂದ್ರ, ಮೋಹನ್ಗೌಡ, ಶ್ರೀಪಾದ ಹಾಗೂ ತಮ್ಮಣ್ಣಗೌಡರ ಅಡಕೆ ತೋಟಗಳಿಗೆ ಕಳೆದ ಹಲವು ತಿಂಗಳುಗಳಿಂದ ಕಾಡುಹಂದಿಗಳು ನಿರಂತರವಾಗಿ ದಾಳಿ ಮಾಡುತ್ತಿವೆ. ಕಳೆದ ರಾತ್ರಿಯಲ್ಲೇ ಹಂದಿಗಳ ಹಿಂಡು ತೋಟಗಳಿಗೆ ನುಗ್ಗಿ 2 ರಿಂದ 4 ವರ್ಷದ ಅಡಿಕೆ ಗಿಡಗಳನ್ನು ಬುಡಸಮೇತ ನೆಲಸಮಗೊಳಿಸಿದೆ.
150ಕ್ಕೂ ಹೆಚ್ಚು ಗಿಡಗಳನ್ನು ನಾಶ ಮಾಡಿದೆ. ಅರಣ್ಯವನ್ನು ಕಿತ್ತು ತೋಟ ಮಾಡಿಲ್ಲ, ನಮ್ಮ ಹೊಲಗಳಿಗೆ ನುಗ್ಗಿ ಹಾನಿ ಮಾಡಿದ ಹಂದಿಗಳಿಂದ ನಮ್ಮನ್ನು ಯಾರು ಕಾಪಾಡ್ತಾರೆ?”ಎಂದು ಸ್ಥಳೀಯ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಕ್ರಮ ವಹಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
