ಮೂಡಿಗೆರೆ ಪಟ್ಟಣದ ನೀಲಂ ಸೇಠ್ ಅವರ ಕಾಳುಮೆಣಸು ಗೋದಾಮಿಮಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಗೋದಾಮಿನಲ್ಲಿ ಸುಮಾರು 1,800 ಕೆ.ಜಿ ಕಾಳುಮೆಣಸು ಕಳವು ಮಾಡಿರುವುದು ಪತ್ತೆಯಾಗಿದೆ.
ಖಚಿತ ಮಾಹಿತಿಯ ಮೇರೆಗೆ ವೃತ್ತ ನಿರೀಕ್ಷಕ ರಾಜಶೇಖರ್ ಅವರ ನೇತೃತ್ವದಲ್ಲಿ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ ಹಾಗೂ ಪೊಲೀಸರ ತಂಡ ದಾಳಿ ನಡೆಸಿ, ಬಾಪುನಗರದ ಸಬೀನಾ (35) ಎಂಬ ಮಹಿಳಾ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಪಟ್ಟಣದ ವೇಣುಗೋಪಾಲ ಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ನೀಲಮ್ ಸೇಠ್ ಎಂಬುವರ ಗೋದಾಮಿನ ಶೆಟರ್ ತೆರೆದು ಆರೋಪಿಗಳು ಕಾಳುಮೆಣಸಿನ ಚೀಲಗಳನ್ನು ನಿರಂತರವಾಗಿ ರಾತ್ರಿ ಕಳ್ಳತನ ಮಾಡುತ್ತಿದ್ದರು. ಒಟ್ಟು ಸುಮಾರು 80 ಮೂಟೆ ಕಾಳುಮೆಣಸು ಕಳವು ಮಾಡಿದ್ದಾರೆ ಎಂಬುದು ಪೊಲೀಸ್ ಇಲಾಖೆ ಮಾಹಿತಿಯಿಂದ ತಿಳಿದು ಬಂದಿದೆ.
ಅ.19ರಂದು ನಿಲಂ ಪೊಲೀಸರಿಗೆ ದೂರು ನೀಡಿದ್ದರು. ಗೋದಾಮಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿರದ ಕಾರಣ ಆರೋಪಿಗಳ ಪತ್ತೆ ಕಾರ್ಯ ಪೊಲೀಸರಿಗೆ ಕಷ್ಟವಾಗಿತ್ತು. ಪಟ್ಟಣದ ವಿವಿಧ ರಸ್ತೆಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಗೋಣಿಚೀಲದಲ್ಲಿ ಸರಕು ತುಂಬಿಸಿ ಕಾರಿನಲ್ಲಿ ಸಾಗಿಸುತ್ತಿರುವುದು ಕಂಡುಬಂದಿದೆ. ಅದರ ಜಾಡು ಹಿಡಿದು ಭೇದಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
