ಹಾಸನ: ಸಂಸದ ಶ್ರೇಯಸ್ ಪಟೇಲ್ ವಿರುದ್ಧದ ಆಸ್ತಿ ವಿವರ ಮುಚ್ಚಿಟ್ಟ ಆರೋಪದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಈ ಸಂಬಂಧ ವಕೀಲ ಪೂರ್ಣಚಂದ್ರ ತೇಜಸ್ವಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಡಿಸಿ ಕಛೇರಿಯ ಕಟ್ಟಡದಲ್ಲಿರುವ ಸಂಸದರ ಕಛೇರಿಗೆ ನೋಟಿಸ್ ಅಂಟಿಸಿದ್ದಾರೆ. ಅಕ್ಟೋಬರ್ 6 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ನಲ್ಲಿ ಸೂಚಿಸಲಾಗಿದೆ.
ಲೋಕಸಭಾ ಚುನಾವಣೆ ವೇಳೆ ತಮ್ಮ ತಾತ ಮಾಜಿ ಸಂಸದ ಜಿ.ಪುಟ್ಟಸ್ವಾಮಿಗೌಡರ ಹೆಸರಿನಲ್ಲಿ ಬೆಂಗಳೂರಿನಲ್ಲಿರುವ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ವಿವರ ಮುಚ್ಚಿಟ್ಟ ಆರೋಪ ಸಂಸದರ ಮೇಲಿದೆ. ಇನ್ನೂ ಚುನಾವಣೆಗೂ ಮುನ್ನ ತಾತನ ಆಸ್ತಿಗೆ ಸಂಸದರು ತೆರಿಗೆ ಕಟ್ಟಿದ್ದರು. ಈ ಹಿಂದೆ ಆಸ್ತಿ ವಿವರ ಮುಚ್ಚಿಟ್ಟ ಪ್ರಕರಣದಲ್ಲೇ ಸದಸ್ಯತ್ವದಿಂದ ಮಾಜಿ ಸಂಸದ ಪ್ರಜ್ವಲ್ರೇವಣ್ಣ ಅನರ್ಹಗೊಂಡಿದ್ದ. ಇದೇ ಆರೋಪದ ಕೇಸ್ ದಾಖಲಿಸಿ ಸದಸ್ಯತ್ವ ಅನರ್ಹಕ್ಕೆ ಜೆಡಿಎಸ್ ಕೇಸ್ ದಾಖಲಿಸಿದೆ.
ಹೈಕೋರ್ಟ್ನಲ್ಲಿ ದಾಖಲಾದ ದೂರು ವಜಾಗೊಂಡಿದ್ದ ಹಿನ್ನೆಲೆ, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿದ್ದು, ದೂರು ಸ್ವೀಕಾರ ಮಾಡಿ, ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಬಗ್ಗೆ ಸಂಸದರಿಗೆ ನೋಟಿಸ್ನ್ನು ಖುದ್ದಾಗಿ ನಿಡುವುದಾಗಿಯೂ ವಕೀಲರು ತಿಳಿಸಿದ್ದಾರೆ.
ನೋಟಿಸ್ ಅಂಟಿಸಲು ಬಂದಾಗ ವಕೀಲರತ್ತ ತಿರುಗಿ ನೋಡದೆ ಶ್ರೇಯಸ್ ಪಟೇಲ್ ತೆರಳಿದ್ದಾರೆ. ಈ ವೇಳೆ ಗರಂ ಆದ ವಕೀಲರು, ಕೋರ್ಟ್ ಸೂಚನೆಯಂತೆ ನಾನು ಬಂದಿದ್ದೇನೆ. ಯುವ ಸಂಸದರಾಗಿ ಕಾನೂನಿಗೆ ಗೌರವ ಕೊಡಬೇಕಿತ್ತು. ಇವರ ನಡೆ ಹೀಗಿರುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಸಂಸದರು ತಮ್ಮ ನಡೆ ಬದಲಾಯಿಸಿಕೊಳ್ಳಬೇಕು. ಸಂಸದರು ವಕೀಲ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ನೋಟಿಸ್ ಸ್ವೀಕಾರ ಮಾಡದೆ ಹೋದರೆ ಬೇಡ ಎನ್ನಬೇಕಿತ್ತು ಎಂದು ಕಿಡಿಕಾರಿದ್ದಾರೆ.
