Tuesday, February 10, 2026
Homeಜಿಲ್ಲಾಸುದ್ದಿಚಿಲ್ಲರೆ ಮತ್ತು ಹತಾಶೆಯ ಪರಮಾವಧಿ: ಡಿಕೆಶಿಗೆ ಜೆಡಿಎಸ್ ಶಾಸಕ ಟಿ.ಎ. ಶರವಣ ತಿರುಗೇಟು

ಚಿಲ್ಲರೆ ಮತ್ತು ಹತಾಶೆಯ ಪರಮಾವಧಿ: ಡಿಕೆಶಿಗೆ ಜೆಡಿಎಸ್ ಶಾಸಕ ಟಿ.ಎ. ಶರವಣ ತಿರುಗೇಟು

ಬೆಂಗಳೂರು: “ಬಿಜೆಪಿ ಜೊತೆ ಜೆಡಿಎಸ್ ಶೀಘ್ರವೇ ವಿಲೀನವಾಗಲಿದೆ” ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಜೆಡಿಎಸ್ ವಿಧಾನ ಪರಿಷತ್ ಉಪನಾಯಕ ಹಾಗೂ ಶಾಸಕ ಟಿ.ಎ. ಶರವಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಒಬ್ಬ ಹಿರಿಯ ರಾಜಕಾರಣಿಯಾಗಿ ಇಷ್ಟು ಹಗುರವಾಗಿ ಮತ್ತು ಬೇಜವಾಬ್ದಾರಿಯುತವಾಗಿ ಮಾತನಾಡುವುದು ಶೋಭೆಯಲ್ಲ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಿಕೆಶಿ ಅವರ ಹೇಳಿಕೆಗಳನ್ನು ಚಿಲ್ಲರೆ ಮತ್ತು ಹತಾಶೆಯ ಪರಮಾವಧಿ ಎಂದು ಬಣ್ಣಿಸಿದ್ದಾರೆ. ವರದಿಯ ಮುಖ್ಯಾಂಶಗಳು ಇಲ್ಲಿವೆ:

ಕಾಂಗ್ರೆಸ್ ಮೊದಲು ಆರ್‌ಜೆಡಿ ಜೊತೆ ವಿಲೀನವಾಗಲಿ

“ಡಿ.ಕೆ. ಶಿವಕುಮಾರ್ ಅವರು ಮೊದಲು ತಮ್ಮ ಪಕ್ಷದ ಅಸ್ತಿತ್ವದ ಬಗ್ಗೆ ಚಿಂತಿಸಲಿ. ದೇಶಾದ್ಯಂತ ಕಾಂಗ್ರೆಸ್ ಅಧೋಗತಿಗೆ ತಲುಪಿದೆ. ಬಿಹಾರದಲ್ಲಿ ಕೇವಲ ಐದು ಸ್ಥಾನ ಗೆದ್ದಿರುವ ಕಾಂಗ್ರೆಸ್, ಮೊದಲು ಅಲ್ಲಿನ ಆರ್‌ಜೆಡಿ ಜೊತೆ ವಿಲೀನವಾಗಲಿ. ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಲು ಡಿಕೆಶಿ ಅವರಿಗೆ ಯಾವುದೇ ಹಕ್ಕಿಲ್ಲ” ಎಂದು ಶರವಣ ಪ್ರಶ್ನಿಸಿದ್ದಾರೆ.

ಮೈತ್ರಿ ಶಕ್ತಿ ಕಂಡು ಕಾಂಗ್ರೆಸ್‌ಗೆ ನಡುಕ

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಕಂಡು ಕಾಂಗ್ರೆಸ್‌ಗೆ ನಡುಕ ಹುಟ್ಟಿದೆ. ಸರ್ಕಾರದ ವಿಫಲ ಆಡಳಿತದಿಂದ ಜನರಿಗೆ ಭ್ರಮನಿರಸನವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆಯಲು ಸನ್ನದ್ಧರಾಗಿದ್ದಾರೆ. ಇದರಿಂದ ಧೃತಿಗೆಟ್ಟಿರುವ ಕೆಪಿಸಿಸಿ ಅಧ್ಯಕ್ಷರು ಜನರಲ್ಲಿ ಗೊಂದಲ ಮೂಡಿಸಲು ಇಂತಹ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಅಧಿಕಾರ ಹಂಚಿಕೆ ವಿಫಲ – ಡಿಕೆಶಿಗೆ ದಿಗ್ಭ್ರಮೆ

ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಸಂಪೂರ್ಣ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲುಗೈ ಕಂಡು ಡಿಕೆಶಿ ದಿಗ್ಭ್ರಮೆಗೊಂಡಿದ್ದಾರೆ. ಈ ಹತಾಶೆಯಿಂದಲೇ ಅವರು ದಿಕ್ಕುತೋಚದೆ ಗೊಂದಲದ ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕ ಬದುಕಿನಲ್ಲಿ ತಮ್ಮ ಘನತೆಯನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಶರವಣ ಕಿಡಿಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!